ಬೆಂಗಳೂರು: ಗ್ರಾಮೀಣ ಭಾಗದ ಸಾರ್ವಜನಿಕರು ವಿವಿಧ ಸರ್ಕಾರಿ ಸೇವೆಗಳು ಹಾಗೂ ಪ್ರಮಾಣ ಪತ್ರಗಳನ್ನು ಪಡೆಯಲು ಇನ್ಮುಂದೆ ದೂರದ ನಾಡಕಚೇರಿಗಳಿಗೆ (ಅಟಲ್ ಜೀ ಜನಸ್ನೇಹಿ ಕೇಂದ್ರಗಳು) ಅಲೆಯಬೇಕಾದ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಮಹತ್ವದ ಕ್ರಮ ಕೈಗೊಂಡಿದ್ದು, ನಾಡಕಚೇರಿಯಲ್ಲಿ ಸಿಗುವ ವಿವಿಧ ಪ್ರಮುಖ ಸೇವೆಗಳನ್ನು ಈಗ ನಿಮ್ಮದೇ ಗ್ರಾಮದ ಹತ್ತಿರವಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಲಭ್ಯವಾಗುವಂತೆ ಮಾಡಿದೆ.
ಬೆಳೆ ದೃಢೀಕರಣ ಪ್ರಮಾಣ ಪತ್ರ ಸೇರಿದಂತೆ ಸಾರ್ವಜನಿಕರು ತಮಗೆ ಬೇಕಾದ ಅಗತ್ಯ ದಾಖಲೆಗಳನ್ನು ಪಡೆಯಲು ದೂರ ಪ್ರಯಾಣ ಮಾಡುವುದನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ.
ಪ್ರಮುಖವಾಗಿ ಈ ಕೆಳಗಿನ ದೃಢೀಕರಣ ಪತ್ರಗಳು ಕೇವಲ ರೂ. 40/- ಗಳ ಅರ್ಜಿ ಶುಲ್ಕದೊಂದಿಗೆ ಲಭ್ಯವಿವೆ:
1. ಅನುಕಂಪದ ಆಧಾರದ ನೇಮಕಾತಿಗೆ ಆದಾಯ ದೃಢೀಕರಣ ಪತ್ರ
ಅಗತ್ಯವಿರುವ ದಾಖಲೆಗಳು: ಪಡಿತರ ಚೀಟಿ/ಮತದಾರರ ಗುರುತಿನ ಚೀಟಿ/ಆಧಾರ್ ಕಾರ್ಡ್, ಅರ್ಜಿ ನಮೂನೆಯಲ್ಲಿ ಸ್ವಯಂ ಘೋಷಿತ ಪತ್ರ, ಮರಣ ಪ್ರಮಾಣ ಪತ್ರ, ಮತ್ತು ಮರಣ ಹೊಂದಿದವರ ವೇತನ ಹಾಗೂ ಪಿಂಚಣಿ ಪ್ರಮಾಣ ಪತ್ರ.
ಕಾರ್ಯ ವಿಧಾನ: ಗ್ರಾಮಲೆಕ್ಕಿಗರು ಕ್ಷೇತ್ರ ಪರಿಶೀಲನೆ ನಡೆಸಿದ ವರದಿಯ ಆಧಾರದ ಮೇಲೆ ಈ ಪತ್ರವನ್ನು ವಿತರಿಸಲಾಗುತ್ತದೆ.
2. ಸಾಲ ತೀರಿಸುವ ಶಕ್ತಿ ದೃಢೀಕರಣ ಪತ್ರ
ಅಗತ್ಯವಿರುವ ದಾಖಲೆಗಳು: ಪಡಿತರ ಚೀಟಿ/ಮತದಾರರ ಗುರುತಿನ ಚೀಟಿ/ಆಧಾರ್ ಕಾರ್ಡ್, ಭೂಮಾಲೀಕರ ಪಹಣಿ (ಆಪರೇಟರ್ ಆನ್ಲೈನ್ನಲ್ಲಿ ಮುದ್ರಿಸಬಹುದು) ಮತ್ತು ಜಮೀನಿಗೆ ಸಂಬಂಧಿಸಿದ ಇತರೆ ದಾಖಲೆಗಳು, ಆಸ್ತಿಗೆ ಸಂಬಂಧಿಸಿದಂತೆ ಉಪ ನೋಂದಣಾಧಿಕಾರಿಗಳಿಂದ ಪಡೆದ ೧೨ ವರ್ಷಗಳ ಋಣಭಾರ ಪ್ರಮಾಣ ಪತ್ರ (EC), ಹಾಗೂ ಆದಾಯ ತೆರಿಗೆ ಪಾವತಿ ದಾಖಲೆ.
3. ವಂಶವೃಕ್ಷ ದೃಢೀಕರಣ ಪತ್ರ
ಅಗತ್ಯವಿರುವ ದಾಖಲೆಗಳು: ಪಡಿತರ ಚೀಟಿ/ಮತದಾರರ ಗುರುತಿನ ಚೀಟಿ/ಆಧಾರ್ ಕಾರ್ಡ್ ಮತ್ತು ಅರ್ಜಿ ನಮೂನೆಯಲ್ಲಿ ಸ್ವಯಂ ಘೋಷಿತ ಪತ್ರ.
ಕಾರ್ಯ ವಿಧಾನ: ಗ್ರಾಮಲೆಕ್ಕಿಗರು ಕ್ಷೇತ್ರ ಪರಿಶೀಲನೆ ಮಾಡಿದ ವರದಿಯ ಆಧಾರದ ಮೇಲೆ ಪ್ರಮಾಣ ಪತ್ರ ನೀಡಲಾಗುತ್ತದೆ.
ಸಾರ್ವಜನಿಕರಲ್ಲಿ ವಿನಂತಿ:
ಸಮಯ ಮತ್ತು ಹಣವನ್ನು ಉಳಿಸಲು ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ದೂರದ ನಾಡಕಚೇರಿಗಳಿಗೆ ಹೋಗುವ ಬದಲು, ತಕ್ಷಣವೇ ನಿಮ್ಮ ಹತ್ತಿರದ 'ಬಾಪೂಜಿ ಸೇವಾ ಕೇಂದ್ರ'ಕ್ಕೆ ಭೇಟಿ ನೀಡಿ ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಲಾಗಿದೆ. ನಿಮ್ಮ ಅನುಕೂಲವೇ ಸರ್ಕಾರದ ಆದ್ಯತೆಯಾಗಿದೆ.

