ಶಿವಮೊಗ್ಗ: ಜಿಲ್ಲೆಯ ಸಾಗರದ ಪ್ರತಿಷ್ಠಿತ ಗಾಂಧಿನಗರ ಯುವಜನ ಸಂಘದ 51ನೇ ವರ್ಷದ (2026-2027ನೇ ಸಾಲಿನ) ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ಸಂಘದ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಧರ್ಮರಾಜ್ ಜಿ ಅವರು ಆಯ್ಕೆಯಾಗಿದ್ದಾರೆ.
ಸಂಘದ ಗೌರವಾಧ್ಯಕ್ಷರಾಗಿ ರಾಮಪ್ಪ ಕಾನಲೆ, ಉಪಾಧ್ಯಕ್ಷರಾಗಿ ಶ್ರೀಪಾದ ಹೆಗಡೆ ಮತ್ತು ರಾಘವೇಂದ್ರ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಕೆ.ಜಿ., ಸಹ ಕಾರ್ಯದರ್ಶಿಯಾಗಿ ಶ್ರೀನಿಧಿ ಹಾಗೂ ಖಜಾಂಚಿಯಾಗಿ ರಾಘವೇಂದ್ರ ಹೆಚ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀರಾಮ್ ಚನ್ನವೀರ ಮತ್ತು ಗಣೇಶ್ ಅರಳಿಕಟ್ಟೆ ಹಾಗೂ ಸಾಂಪ್ರದಾಯಿಕ ದಸರಾ ಕುಸ್ತಿ ಸ್ಪರ್ಧೆಯ ಸಂಚಾಲಕರಾಗಿ ಸಂತೋಷ್ ಸದ್ಗುರು ಮತ್ತು ವೆಂಕಟೇಶ್ ಬಿಳಿಸಿರಿ ನೇಮಕಗೊಂಡಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಯುವಶಕ್ತಿಯ ಸಂಘಟನೆಗೆ ಆದ್ಯತೆ: ಅಧ್ಯಕ್ಷ ಧರ್ಮರಾಜ್ ಜಿ
ಆಯ್ಕೆಯ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಧರ್ಮರಾಜ್ ಜಿ, "ಗಾಂಧಿನಗರ ಯುವಜನ ಸಂಘವು ಐದು ದಶಕಗಳ ಭವ್ಯ ಇತಿಹಾಸವನ್ನು ಹೊಂದಿದೆ. ಸುವರ್ಣ ಮಹೋತ್ಸವದ ಸಂಭ್ರಮ ಮುಗಿಸಿ 51ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷತೆಯ ಜವಾಬ್ದಾರಿ ದೊರೆತಿರುವುದು ಹೆಮ್ಮೆಯ ವಿಚಾರ. ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ ಮತ್ತು ಸಮಾಜಸೇವೆಯ ಮನೋಭಾವವನ್ನು ಬೆಳೆಸಲು ನಮ್ಮ ನೂತನ ತಂಡ ಬದ್ಧವಾಗಿದೆ. ವಿಶೇಷವಾಗಿ ಸಾಗರದ ಹೆಮ್ಮೆಯ ದಸರಾ ಕುಸ್ತಿ ಸೇರಿದಂತೆ ಸಂಘದ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮತ್ತು ಅರ್ಥಪೂರ್ಣವಾಗಿ ಆಯೋಜಿಸಲು ಸರ್ವರ ಸಹಕಾರದೊಂದಿಗೆ ಶ್ರಮಿಸಲಾಗುವುದು," ಎಂದು ತಿಳಿಸಿದರು.

