
ಬೆಂಗಳೂರು: ಕರ್ನಾಟಕ ಮುದ್ರಾಂಕ ಕಾಯ್ದೆ 1957ರಲ್ಲಿನ ಷಡ್ಯೂಲ್ನಲ್ಲಿರುವ ಅನುಚ್ಛೇದಗಳಂತೆ ಮುದ್ರಾಂಕ ಶುಲ್ಕವನ್ನು ಆಕರಿಸಲಾಗುತ್ತಿದ್ದು, ಪ್ರಸ್ತುತ ಕ್ರಯಪತ್ರಗಳಿಗೆ ಅನುಚ್ಛೇದ 20 (1)ರನ್ವಯ ಶೇಕಡ 5% ರಷ್ಟು ಮುದ್ರಾಂಕ ಶುಲ್ಕವನ್ನು ಆಕರಿಸಲಾಗುತ್ತಿದೆ. ಸದರಿ ಮುದ್ರಾಂಕ ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಮುಂದೆ ಇರುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಇಂದು ವಿಧಾನಪರಿಷತ್ತಿನ ಕಲಾಪದ ವೇಳೆ ವಿಧಾನಪರಿಷತ್ತಿನ ಸದಸ್ಯರಾದ ಮುನಿರಾಜುಗೌಡ ಪಿ.ಎಂ. ಅವರ ಪ್ರಶ್ನೆಗೆ ಉತ್ತರಿಸದ ಸಚಿವರು ಜಮೀನುಗಳ ಮೌಲ್ಯ ಪರಿಷ್ಕರಣೆ ಮಾಡಿ ಸುಮಾರು ನಾಲ್ಕೂವರೆ ವರ್ಷ ಮೇಲ್ಪಟ್ಟಿದ್ದು, ಜಮೀನಿನ ಮೌಲ್ಯ ಪರಿಷ್ಕರಣೆಗೆ ಕ್ರಮ ವಹಿಸಲಾಗುವುದು ಆದರೆ ಮುದ್ರಾಂಕ ಶುಲ್ಕ ಪರಿಷ್ಕರಣೆ ಇಲ್ಲ ಎಂದು ತಿಳಿಸಿದರು.
ಮಾರುಕಟ್ಟೆ ಬೆಲೆ ಹೆಚ್ಚಿಸಲು 35 ಲಕ್ಷ ರೂ ನಿಂದ 45 ಲಕ್ಷ ರೂ ವರೆಗಿನ ಆಪಾರ್ಟ್ಮೆಂಟ್ ಅಥವಾ ಫ್ಲಾಟ್ಗಳ ಮೊದಲನೇ ಕ್ರಯದ ಮುದ್ರಾಂಕ ಶುಲ್ಕವನ್ನು ಶೇಕಡ 5% ರಿಂದ 3% ರಷ್ಟು ಕಡಿತ ಮಾಡಲಾಗಿತ್ತು. ಸದರಿ ಶುಲ್ಕವನ್ನು ಹೆಚ್ಚಳ ಮಾಡುವ ಪ್ರಸ್ತಾವ ಸದ್ಯಕ್ಕೆ ಸರ್ಕಾರದ ಮುಂದೆ ಇರುವುದಿಲ್ಲ ಎಂದು ತಿಳಿಸಿದರು.