ಶಿವಮೊಗ್ಗ : ಗಾಂಜಾ ಮಾರಾಟ ಮಾಡುತ್ತಿದ್ದ ಮೊಮ್ಮಗನ ವಿರುದ್ಧ ದೂರು ನೀಡಲು ತೆರಳುತ್ತಿದ್ದ ಅಜ್ಜಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಶಿವಮೊಗ್ಗದ ಬಸ್ ನಿಲ್ದಾಣದ ಹಿಂಭಾಗದ ಮಂಜುನಾಥ ಬಡಾವಣೆಯ ಸುಶೀಲಮ್ಮ (65) ಕೊಲೆಯಾದವರು.
ಇವರ ಮೊಮ್ಮಗ ಕಿಶೋರ್ (35) ಕೊಲೆ ಆರೋಪಿ.
ಕಿಶೋರ್ ಗಾಂಜಾ ವ್ಯಸನಿ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದನು. ಬುಧವಾರ ಸಂಜೆ ಸುಶೀಲಮ್ಮನ ಮನೆಯಲ್ಲಿ ಕಿಶೋರ್ ಗಾಂಜಾ ಪ್ಯಾಕೆಟ್ ಮಾಡುತ್ತಿದ್ದರು. ಜೊತೆಗೆ ಹುಡುಗರನ್ನು ಕರೆದುಕೊಂಡು ಬಂದಿದ್ದರು. ಈ ವೇಳೆ ಸುಶೀಲಮ್ಮ ನನ್ನ ಮನೆಯಲ್ಲಿ ಗಾಂಜಾ ಮಾರಾಟ ಬೇಡ ಎಂದಾಗ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಆ ಬಳಿಕ ಸುಶೀಲಮ್ಮ ದೊಡ್ಡಪೇಟೆ ಪೊಲೀಸ್ ಠಾಣೆಯ ಕಡೆ ಹೋಗುವಾಗ ಕಿಶೋರ್ ಬೈಕ್ನಲ್ಲಿ ಬಂದು ಅಜ್ಜಿಗೆ ಡಿಕ್ಕಿ ಹೊಡೆದು ಬೀಳಿಸಿದ್ದಾನೆ. ನಂತರ ರಸ್ತೆ ಪಕ್ಕದಲ್ಲಿ ಇದ್ದ ಸೈಜ್ ಕಲ್ಲನ್ನು ತೆಗೆದುಕೊಂಡು ನೆಲಕ್ಕೆ ಬಿದ್ದ ಅಜ್ಜಿ ತಲೆಯ ಮೇಲೆ ಹಾಕಿದ್ದಾನೆ. ಇದರಿಂದ ಅಜ್ಜಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಗಳಕ್ಕೆ ಕಾರಣವಾದ ಗಾಂಜಾ ದಂಧೆ
ಆರೋಪಿ ಕಿಶೋರ್ ತೀವ್ರ ಗಾಂಜಾ ವ್ಯಸನಿಯಾಗಿದ್ದು, ಮನೆಯಲ್ಲಿಯೇ ಕಾನೂನುಬಾಹಿರವಾಗಿ ಗಾಂಜಾ ಮಾರಾಟದ ದಂಧೆಯನ್ನೂ ನಡೆಸುತ್ತಿದ್ದ ಎನ್ನಲಾಗಿದೆ. ಬುಧವಾರ ಸಂಜೆ ಸುಶೀಲಮ್ಮ ಅವರ ಮನೆಯಲ್ಲಿಯೇ ಕುಳಿತು ಕಿಶೋರ್ ಕೆಲವು ಯುವಕರೊಂದಿಗೆ ಸೇರಿ ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೆಟ್ ಮಾಡುತ್ತಿದ್ದನು. ಇದನ್ನು ಗಮನಿಸಿದ ಅಜ್ಜಿ ಸುಶೀಲಮ್ಮ, ನನ್ನ ಮನೆಯಲ್ಲಿ ಈ ರೀತಿಯ ಅಕ್ರಮ ದಂಧೆ ಮತ್ತು ಗಾಂಜಾ ಮಾರಾಟ ಮಾಡುವುದು ಬೇಡ ಎಂದು ತೀವ್ರವಾಗಿ ವಿರೋಧಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಜಗಳ ವಿಕೋಪಕ್ಕೆ ತಿರುಗಿದೆ.
ಪೊಲೀಸ್ ಠಾಣೆಗೆ ಹೊರಟ ಅಜ್ಜಿಯ ಹತ್ಯೆ
ಮೊಮ್ಮಗನ ಅಕ್ರಮ ದಂಧೆಯಿಂದ ಬೇಸತ್ತ ಸುಶೀಲಮ್ಮ, ಈ ಬಗ್ಗೆ ದೂರು ನೀಡಲು ದೊಡ್ಡಪೇಟೆ ಪೊಲೀಸ್ ಠಾಣೆಯತ್ತ ಹೆಜ್ಜೆ ಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ಕಿಶೋರ್, ಅಜ್ಜಿಯನ್ನು ತಡೆಯಲು ಬೈಕ್ನಲ್ಲಿ ಬೆನ್ನಟ್ಟಿಕೊಂಡು ಬಂದಿದ್ದಾನೆ. ರಸ್ತೆಯಲ್ಲಿ ಹೋಗುತ್ತಿದ್ದ ಸುಶೀಲಮ್ಮನಿಗೆ ಬೈಕ್ನಿಂದ ಜೋರಾಗಿ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾನೆ. ಅಷ್ಟಕ್ಕೇ ನಿಲ್ಲಿಸದ ಈ ನರಾಧಮ, ರಸ್ತೆ ಬದಿಯಲ್ಲಿದ್ದ ದೊಡ್ಡ ಸೈಜ್ ಕಲ್ಲನ್ನು ಎತ್ತಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ಅಜ್ಜಿಯ ತಲೆಯ ಮೇಲೆ ಹಾಕಿ ವಿಕೃತಿ ಮೆರೆದಿದ್ದಾನೆ. ತಲೆಗೆ ಗಂಭೀರ ಗಾಯವಾದ ಪರಿಣಾಮ ಸುಶೀಲಮ್ಮ ಸ್ಥಳದಲ್ಲಿಯೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಸಿನಿಮೀಯ ಶೈಲಿಯಲ್ಲಿ ಪೊಲೀಸರ ಕಾರ್ಯಾಚರಣೆ
ವೃದ್ಧೆಯನ್ನು ಹತ್ಯೆಗೈದ ಬಳಿಕ ಆರೋಪಿ ಕಿಶೋರ್ ಸ್ಥಳದಿಂದ ಪರಾರಿಯಾಗಿದ್ದನು. ತನಿಖೆ ಕೈಗೆತ್ತಿಕೊಂಡ ದೊಡ್ಡಪೇಟೆ ಪೊಲೀಸರಿಗೆ ಆರೋಪಿ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾಜಪೇಯಿ ಬಡಾವಣೆಯಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ದೊಡ್ಡಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಸತ್ಯನಾರಾಯಣ್ ಮತ್ತು ಸಿಬ್ಬಂದಿ ಆತನನ್ನು ಬಂಧಿಸಲು ಬಡಾವಣೆಯನ್ನು ಸುತ್ತುವರೆದಿದ್ದಾರೆ.
ಪೊಲೀಸರ ಮೇಲೆಯೇ ಹಲ್ಲೆ ಯತ್ನ; ಕಾಲಿಗೆ ಬಿದ್ದ ಗುಂಡು
ಪೊಲೀಸರು ಶರಣಾಗುವಂತೆ ಸೂಚಿಸಿದಾಗ ಆರೋಪಿ ಕಿಶೋರ್ ಸಿಬ್ಬಂದಿ ಗಣೇಶ್ ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪಿಐ ಸತ್ಯನಾರಾಯಣ್ ಅವರು ಮೊದಲು ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಆರೋಪಿ ಪೊಲೀಸರ ಮೇಲೆಯೇ ತಿರುಗಿಬಿದ್ದು ಪರಾರಿಯಾಗಲು ಯತ್ನಿಸಿದಾಗ, ಅನಿವಾರ್ಯವಾಗಿ ಪಿಐ ಸತ್ಯನಾರಾಯಣ್ ಅವರು ಕಿಶೋರನ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಗಾಯಗೊಂಡಿರುವ ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

