ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಏಳು ವರ್ಷಗಳುೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಆಗಸ್ಟ್ 5 ಅನ್ನು 'ಯೌಮ್-ಇ-ಇಸ್ತೇಹಾಲ್' ಅಥವಾ 'ಶೋಷಣೆಯ ದಿನ'ವಾಗಿ ಆಚರಿಸಲು ಪಾಕಿಸ್ತಾನ ನಡೆಸುತ್ತಿರುವ "ನಿಷ್ಪ್ರಯೋಜಕ ಯತ್ನಗಳನ್ನು" ಭಾರತ ಬುಧವಾರ ದೃಢವಾಗಿ ತಿರಸ್ಕರಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣ್ಧೀರ್ ಜೈಸ್ವಾಲ್ ಮಾತನಾಡಿ, ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವ ಪಾಕಿಸ್ತಾನದ ಈ ಪ್ರಯತ್ನಗಳು ತನ್ನದೇ ಆದ ಕಳಪೆ ಮಾನವ ಹಕ್ಕುಗಳ ದಾಖಲೆ ಮತ್ತು "ಭಯೋತ್ಪಾದನೆಯ ಜಾಗತಿಕ ಕೇಂದ್ರ" ಎಂಬ ಹಣೆಪಟ್ಟಿಯಿಂದ ಜಾಗತಿಕ ಗಮನವನ್ನು ಬೇರೆಡೆಗೆ ಸೆಳೆಯುವ ಏಕೈಕ ಉದ್ದೇಶವನ್ನು ಹೊಂದಿವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಗಸ್ಟ್ 5, 2019 ರಂದು ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತ್ತು. ಈ ನಿರ್ಧಾರವು ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದ್ದು, ಇದು ಆ ಪ್ರದೇಶದ ಜನರಿಗೆ ಅಭೂತಪೂರ್ವ ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಪ್ರಜಾಪ್ರಭುತ್ವದ ಸಬಲೀಕರಣವನ್ನು ತಂದಿದೆ ಎಂದು ಜೈಸ್ವಾಲ್ ಸ್ಪಷ್ಟಪಡಿಸಿದರು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅಭಿಭಾಜ್ಯ ಅಂಗಗಳಾಗಿವೆ ಮತ್ತು ಎಂದೆಂದಿಗೂ ಹಾಗೆಯೇ ಇರುತ್ತವೆ ಎಂದು ಅವರು ಪುನರುಚ್ಚರಿಸಿದರು.
ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ (PoJK) ಮೂಲಭೂತ ಹಕ್ಕುಗಳ ಕ್ರೂರ ದಮನ ನಡೆಯುತ್ತಿರುವುದನ್ನು ಅಂತರರಾಷ್ಟ್ರೀಯ ಸಮುದಾಯ ಗಮನಿಸುತ್ತಿದೆ ಎಂದು ತಿಳಿಸಿದ ವಕ್ತಾರರು, ಇತ್ತೀಚಿನ ವಾರಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ನಾಗರಿಕರ ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಮಾರಕ ಹಿಂಸಾಚಾರ ಮತ್ತು ಗುರಿಪಡಿಸಿದ ಹತ್ಯೆಗಳನ್ನು ನಡೆಸಿವೆ ಎಂದು ಆರೋಪಿಸಿದರು.
ಜೂನ್ ತಿಂಗಳಿನಿಂದ PoJK ಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಪಾಕಿಸ್ತಾನಿ ಪಡೆಗಳ ದಮನಕಾರಿ ದಾಳಿಯಲ್ಲಿ ಕನಿಷ್ಠ 90 ಜನರು ಸಾವನ್ನಪ್ಪಿದ್ದಾರೆ. ಕಪಟ ನಾಟಕಗಳನ್ನು ಆಡುವುದನ್ನು ಬಿಟ್ಟು, ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತದ ಭೂಪ್ರದೇಶವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಭಾರತ ಎಚ್ಚರಿಕೆ ನೀಡಿದೆ.

