Thursday, 22 Apr, 1.34 pm ಕನ್ನಡ ಪ್ರಭ

ಕರೋನಾ ವೈರಸ್
ಭಿಕ್ಷೆ ಬೇಡುತ್ತೀರೊ, ಕದಿಯುತ್ತೀರೊ, ಸಾಲ ತರ್ತಿರೊ: ಆಕ್ಸಿಜನ್ ಒದಗಿಸಲು ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ತಾಕೀತು!

ನವದೆಹಲಿ: ಆಮ್ಲಜನಕವನ್ನು ಕೈಗಾರಿಕೆಗಳಿಗೆ ಬಳಸಲು ಅವಕಾಶ ನೀಡಿರುವುದಕ್ಕೆ ಆಕ್ರೋಶಗೊಂಡಿರುವ ದೆಹಲಿ ಹೈಕೋರ್ಟ್ ವಾಸ್ತವ ಅರ್ಥ ಮಾಡಿಕೊಳ್ಳಲು ನಿಮಗೇನು ದಾಡಿ ಎಂದು ಕೇಂದ್ರ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ದೇಶದ ಜನರು ಆಕ್ಸಿಜನ್ ಸಿಗದೆ ಸಾಯುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಿಜಕ್ಕೂ ಖೇದದ ಸಂಗತಿ. ಜನರು ಸಾಯುತ್ತಿದ್ದರೂ ನಿಮಗೆ ಕೈಗಾರಿಕೆಗಳದ್ದೇ ಚಿಂತೆ ಅಲ್ಲವೇ? ಜನರ ಜೀವಕ್ಕೆ ಬೆಲೆ ಇಲ್ಲವೆ? ನೀವು ದೊಡ್ಡ ದುರಂತದತ್ತ ಸಾಗುತ್ತಿದ್ದೀರಿ ಎಂದು ನ್ಯಾಯಾಧೀಶರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮ್ಯಾಕ್ಸ್ ಗ್ರೂಪ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠವು, ಆಮ್ಲಜನಕದ ಪೂರೈಕೆಯನ್ನು ಖಾತ್ರಿಪಡಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಹೆಗಲ ಮೇಲಿದೆ. ಅಗತ್ಯಬಿದ್ದರೆ ಉಕ್ಕು ಮತ್ತು ಪೆಟ್ರೋಲಿಯಂ ಸೇರಿದಂತೆ ಕೈಗಾರಿಕೆಗಳಿಗೆ ಪೂರೈಸುವ ಆಮ್ಲಜನಕವನ್ನು ವೈದ್ಯಕೀಯ ಬಳಕೆಗೆ ಬಳಸಿಕೊಳ್ಳುವಂತೆ ಎಂದು ನ್ಯಾಯಪೀಠ ಹೇಳಿದೆ.

ಆಮ್ಲಜನಕ ಆಮದು ಮಾಡಿಕೊಳ್ಳಲು ಟೆಂಡರ್ ಕರೆದಿದ್ದೇನೆ ಎಂದು ನ್ಯಾಯಪೀಠಕ್ಕೆ ಕೇಂದ್ರ ಸರ್ಕಾರ ಹೇಳಿದ ಕೂಡಲೇ ತಾಳ್ಮೆ ಕಳೆದುಕೊಂಡ ನ್ಯಾಯಧೀಶರು, ನೀವು ನಿಮ್ಮದೇ ಆದ ರೀತಿಯಲ್ಲಿ ಸಿಹಿ ಸಮಯ ಕಳೆಯಿರಿ. ಜನರು ಸಾಯುತ್ತಾರೆ. ಆಸ್ಪತ್ರೆಗಳಿಗೆ ಆಮ್ಲಜನಕ ಒದಗಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ನೀವು ಏನಾದರೂ ಮಾಡಿಕೊಳ್ಳಿ ಜನರಿಗೆ ಸಂವಿಧಾನ ಕೊಟ್ಟಿರುವ ಬದುಕುವ ಹಕ್ಕನ್ನು ಕಾಪಾಡಿ ಎಂದು ನಿರ್ದೇಶನ ನೀಡಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Prabha
Top