ಬೆಂಗಳೂರು: ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡು ವೇದಿಕೆ ಮೇಲೆಯೇ ಶುಕ್ರವಾರ ಕುಸಿದುಬಿದ್ದಿದ್ದ ಮಾಜಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.
ಆರಂಭದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದ್ದರೂ, ವೈದ್ಯಕೀಯ ತಪಾಸಣೆಯ ಬಳಿಕ ಅವರು ಸುರಕ್ಷಿತವಾಗಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮಾಜಿ ಸಚಿವ ಪಿಜಿ ಆರ್ ಸಿಂಧ್ಯಾ ಅವರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸಂತೋಷ್ ಹೆಗ್ಡೆ ಅವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಮಧ್ಯೆ ಅವರಿಗೆ ಎರಡು ಬಾರಿ ವಾಂತಿಯಾಗಿದ್ದು, ತೀವ್ರ ಸುಸ್ತು ಅನುಭವಿಸಿದ್ದಾರೆ. ಇದರಿಂದ ಅವರು ಮನೆಗೆ ಮರಳಲು ನಿರ್ಧರಿಸಿ ವೇದಿಕೆಯಿಂದ ಇಳಿದು ಹೋಗುತ್ತಿದ್ದಾಗ ದಿಢೀರ್ ಕುಸಿದುಬಿದ್ದರು. ಈ ವೇಳೆ ಅಲ್ಲಿಯೇ ಇದ್ದ ವೈದ್ಯರಾದ ರಮೇಶ್ ಬಾಬು ಅವರು ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಸ್ಥಳದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿಲ್ಲ. ತಡ ಮಾಡುವುದು ಅಪಾಯ ಎಂದು ಭಾವಿಸಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು, ತಮ್ಮ ಅಧಿಕೃತ ಸರ್ಕಾರಿ ವಾಹನದಲ್ಲೇ ಸಂತೋಷ್ ಹೆಗ್ಡೆ ಅವರನ್ನು ಮಿಲರ್ಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಕರೆತಂದರು. ಈಗ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರಾಮವಾಗಿದ್ದಾರೆ' ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.
ಮಣಿಪಾಲ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ರುದ್ರೇಶ್ ಅವರು ಸಂತೋಷ್ ಹೆಗ್ಡೆ ಸಂಪೂರ್ಣವಾಗಿ ಸುಧಾರಿಸಿಕೊಂಡಿದ್ದಾರೆ. ಅವರಿಗೆ ಯಾವುದೇ ಗಂಭೀರವಾದ ಹೃದಯಾಘಾತ ಸಂಭವಿಸಿಲ್ಲ. ಕೇವಲ ಸುಸ್ತಾಗಿದ್ದರಿಂದ ಗಡ್ಡಿನೆಸ್ (ತಲೆಸುತ್ತು) ಉಂಟಾಗಿ ಕುಸಿದುಬಿದ್ದಿದ್ದು ಸುರಕ್ಷಿತವಾಗಿದ್ದಾರೆ ಎಂದು ಹೇಳಿದರು.

