Dailyhunt
Dharwad: ಸರ್ಕಾರದ ವಿರುದ್ಧ ಉದ್ಯೋಗಾಕಾಂಕ್ಷಿಗಳಿಂದ ಪ್ರತಿಭಟನೆಗೆ ಅನುಮತಿ ನಿರಾಕರಣೆ: ಎನ್.ಶಶಿಕುಮಾರ್

Dharwad: ಸರ್ಕಾರದ ವಿರುದ್ಧ ಉದ್ಯೋಗಾಕಾಂಕ್ಷಿಗಳಿಂದ ಪ್ರತಿಭಟನೆಗೆ ಅನುಮತಿ ನಿರಾಕರಣೆ: ಎನ್.ಶಶಿಕುಮಾರ್

Karnataka TV 19 hrs ago

Dharwad News: ಧಾರವಾಡ: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಿದ ಘಟನೆ ಮಾಸುವ ಮುನ್ನವೇ ವಿದ್ಯಾಕಾಶಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದೆ.

ಮತ್ತೆ ಬೀದಿಗೆ ಇಳಿಯಲು ಉದ್ಯೋಗಾಕಾಂಕ್ಷಿಗಳು ನಿರ್ಧರಿಸಿದ್ದು, ಆ ಮೂಲಕ ಸರ್ಕಾರಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಲು ರೆಡಿ ಆಗಿದ್ದಾರೆ. ನಾಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಹೋರಾಟ ನಡೆಸಲು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘದಿಂದ ಪ್ರತಿಭಟನೆಗೆ ಸಿದ್ಧತೆ ನಡೆದಿದೆ. ನಾಳೆಯಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಸಂಘಟನೆ ತಯಾರಿ ನಡೆಸಿದೆ.

ಆದರೆ ವಿದ್ಯಾರ್ಥಿಗಳ ಸಂಘದಿಂದ ಕರೆ ನೀಡಲಾಗಿರುವ ಈ ಅನಿರ್ದಿಷ್ಟಾವಧಿ ಹೋರಾಟಕ್ಕೆ ಧಾರವಾಡ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹೋರಾಟ ಸಂಬಂಧ ಉಪನಗರ ಠಾಣೆ ಪೊಲೀಸರು ಒಟ್ಟು 19 ಪ್ರಶ್ನೆಗಳನ್ನು ಕೇಳಿದ್ದು, ಇವುಗಳಿಗೆ ಸಂಘಟನೆ ಲಿಖಿತ ರೂಪದಲ್ಲಿ ಉತ್ತರ ನೀಡಿದೆ. ಆದರೆ ಉತ್ತರಗಳಲ್ಲಿ ಸ್ಪಷ್ಟತೆ ಇಲ್ಲ ಅನ್ನೋ ಕಾರಣ ನೀಡಿ ಪೊಲೀಸರು ಅನುಮತಿ ನಿರಾಕರಣೆ ಮಾಡಿದ್ದಾರೆ.

ಹೋರಾಟದ ವೇಳೆ ಈ ಹಿಂದೆ ಕೆಲ ಅಹಿತಕರ ಘಟನೆಗಳು ನಡೆದಿರುವ ಕಾರಣ ಪ್ರತಿಭಟನೆಗೆ ಅವಕಾಶ ನೀಡಲು ಪೊಲೀಸರು ಒಪ್ಪಿಲ್ಲ. ಹೀಗಾಗಿ ಪೊಲೀಸರ ನಿರ್ಧಾರ ಪ್ರಶ್ನಿಸಿ ಧಾರವಾಡ ಹೈಕೋರ್ಟ್ ‌ಮೊರೆ ಹೋಗಲು ಸಂಘಟನೆ ನಿರ್ಧರಿಸಿದ್ದು, ಕರ್ನಾಟಕ ವಿದ್ಯಾರ್ಥಿಗಳ ಸಂಘ ನಾಳೆ ಈ ಬಗ್ಗೆ ಅರ್ಜಿ ಸಲ್ಲಿಸಲಿದೆ ಎನ್ನಲಾಗಿದೆ.

ಅನುಮತಿ ಇಲ್ಲದೆ ಹೋರಾಟ ಮಾಡಿದರೆ ಕಾನೂನು ಕ್ರಮ'

ಇನ್ನು ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಪೊಲೀಸರ ಅನುಮತಿ ನಿರಾಕರಣೆ ವಿಚಾರ ಸಂಬಂಧ ಧಾರವಾಡದಲ್ಲಿ ಕಮಿಷನರ್​ ಎನ್.ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. AKSSA ಸಂಘಟನೆಯ ಅನಿರ್ದಿಷ್ಟಾವಧಿ ಧರಣಿಗೆ ಉಪನಗರ ಠಾಣೆ ಪೊಲೀಸರು ಒಪ್ಪಿಗೆ ನೀಡಿಲ್ಲ. ಹೀಗಾಗಿ ಅನುಮತಿ ಇಲ್ಲದೆ ಹೋರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಹೋರಾಟದಲ್ಲಿ ಭಾಗಿಯಾಗದಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಹೋರಾಟಕ್ಕೆ ಕರೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಡಿಸಿ ಕಚೇರಿ ಎದುರು ಭದ್ರತೆ ಹೆಚ್ಚಿಸಲಾಗಿದೆ.

ಸಂಗಮೇಶ್ ಸತ್ತೀಗೇರಿ, ಕರ್ನಾಟಕ ಟಿವಿ, ಧಾರವಾಡ

Dailyhunt
Disclaimer: This content has not been generated, created or edited by Dailyhunt. Publisher: Karnataka TV