ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ (Renukaswamy Case) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಸ್ನ 2ನೇ ಆರೋಪಿ ಹಾಗೂ ನಟ ದರ್ಶನ್ನ (Darshan) ಅಭಿಮಾನಿ ಬಳಗದ ಮೂವರು ಸಾಕ್ಷ್ಯ ನಾಶ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರ ( police) ತನಿಖೆಯಲ್ಲಿ ಬಯಲಾಗಿದೆ ಎಂಬುವ ವಿಚಾರ ವರದಿಯಾಗಿದೆ.
ವಾಟ್ಸಾಪ್ ಕಾನ್ಫರೆನ್ಸ್ ಕಾಲ್ನಿಂದ ಬೆದರಿಕೆ? ಕರೆ ಮೂಲಕ ಬೆದರಿಕೆ ಹಾಕಿದ್ದಾರೆ ಎನ್ನಲಾದ ಈ ಪ್ರಕರಣದ ಪ್ರಮುಖ ಆರೋಪಿ ಪುನೀತ್ ಎಂಬುವವನಿಂದ ಪೊಲೀಸರು ಒಟ್ಟು 5 ಮೊಬೈಲ್ಗಳನ್ನು ಜಪ್ತಿ ಮಾಡಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬಂಧಿತರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ವಾಟ್ಸಾಪ್ ಕಾನ್ಫರೆನ್ಸ್ ಕರೆ ಮೂಲಕ ಸಂಪರ್ಕ ಸಾಧಿದಿದ್ದರು. ತಾವು ವಕೀಲರು ಎಂದು ಸುಳ್ಳು ಹೇಳಿ ಸಾಕ್ಷಿಗೆ ನೇರವಾಗಿ ಜೀವ ಬೆದರಿಕೆ ಒಡ್ಡಿದ್ದರಂತೆ. ಈ ಬೆದರಿಕೆ ಕರೆ ಅವರು ಮಾಡಿದ ಬೆನ್ನಲ್ಲೇ ಪೊಲೀಸರು ತಮ್ಮನ್ನು ಬೆನ್ನಟ್ಟಬಹುದು ಎಂಬ ಭಯದಿಂದ ಆರೋಪಿಗಳು ಮೊಬೈಲ್ನಲ್ಲಿದ್ದ ಕಾಲ್ ಹಿಸ್ಟರಿ, ಚಾಟ್ಗಳು ಸೇರಿದಂತೆ ಎಲ್ಲಾ ಪ್ರಮುಖ ಡಿಜಿಟಲ್ ಎವಿಡೆನ್ಸ್ ಸಂಪೂರ್ಣ ಡಿಲೀಟ್ ಮಾಡಿದ್ದರಂತೆ. ಪೊಲೀಸರ ಕಣ್ಣಿಗೆ ಮಣ್ಣೆರಚಲು ಇಡೀ ವಾಟ್ಸಾಪ್ ಅಪ್ಲಿಕೇಶನ್ನನ್ನೇ ಅನ್ಇನ್ಸ್ಟಾಲ್ ಮಾಡಿ, ಬಳಿಕ ಮತ್ತೆ ಹೊಸದಾಗಿ ಇನ್ಸ್ಟಾಲ್ ಮಾಡಿಕೊಂಡಿದ್ದರಂತೆ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸರು ವಶಪಡಿಸಿಕೊಂಡಿರುವ ಐದೂ ಮೊಬೈಲ್ಗಳನ್ನು ಡಿಲೀಟ್ ಆಗಿರುವ ಡೇಟಾ ಮರುಪಡೆಯಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಸಿನಿಮಾ ನಿರ್ಮಾಪಕರಿಗೆ ಕಂಟಕ? ಐವರು ಆರೋಪಿಗಳ ಜಾಮೀನು ರದ್ದತಿಗೆ ಸುಪ್ರೀಂಗೆ ಪೊಲೀಸರ ದೂರು:
ಸಾಕ್ಷಿಗೆ ಬೆದರಿಕೆ ಹಾಕುವಂತೆ ಆರೋಪಿಗಳಿಗೆ ಚಿತ್ರರಂಗದ ಪ್ರಭಾವಿ ನಿರ್ಮಾಪಕರೊಬ್ಬರು ಬೆಂಬಲ ನೀಡಿದ್ದಾರೆ ಎಂಬ ಬಲವಾದ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ. ಪ್ರಾಥಮಿಕ ವಿಚಾರಣೆ ವೇಳೆ ಈ ಅನುಮಾನ ಮೂಡಿದ್ದು, ಕಾಮಾಕ್ಷಿಪಾಳ್ಯ ಪೊಲೀಸರು ಆ ನಿರ್ಮಾಪಕನ ವಿರುದ್ಧ ಗುಪ್ತವಾಗಿ ದಾಖಲೆಗಳನ್ನು ಕಲೆಹಾಕಲು ಮುಂದಾಗಿದ್ದಾರೆ. ಎಫ್ಎಸ್ಎಲ್ನಿಂದ ಪುನೀತ್ನ ಮೊಬೈಲ್ ಡೇಟಾ ರಿಟ್ರೀವ್ ಆದ ಬಳಿಕ ನಿರ್ಮಾಪಕನ ಕೈವಾಡ ಇರುವುದು ಸಾಬೀತಾದರೆ ಆ ಪ್ರಭಾವಿ ವ್ಯಕ್ತಿಗೂ ಬಂಧನದ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಇನ್ನೊಂದೆಡೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಪ್ರಶ್ನಿಸಿ ಪೊಲೀಸರು ಈಗ ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಧನರಾಜ್, ಪುಟ್ಟಸ್ವಾಮಿ ಯಾನೆ ಪವನ್, ರಾಘವೇಂದ್ರ, ನಂದೀಶ್ ಮತ್ತು ವಿನಯ್ ಅವರಿಗೆ ಸಿಕ್ಕಿರುವ ಜಾಮೀನನ್ನು ರದ್ದುಗೊಳಿಸಬೇಕು ಎಂದು ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯು ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.

