ನವದೆಹಲಿ: ದೇಶದಲ್ಲಿ ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಅವರು ದೃಢಪಡಿಸಿದ್ದಾರೆ. ಜಾರ್ಖಂಡ್ನಲ್ಲಿ (Jharkhand) ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ದೇಶಾದ್ಯಂತ ಈ ಕಾನೂನನ್ನು ಜಾರಿಗೆ ತರಲು ಬದ್ಧವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಕೆಲವು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿರುವ ಈ ನಿಯಮವನ್ನು ಇಡೀ ರಾಷ್ಟ್ರಕ್ಕೆ ವಿಸ್ತರಿಸುವುದು ಸರ್ಕಾರದ ಗುರಿಯಾಗಿದೆ. ಈ ವೇಳೆ ಒಳನುಸುಳುವಿಕೆ ತಡೆಗಟ್ಟುವ ಬಗ್ಗೆಯೂ ಮಾತನಾಡಿದ ಸಚಿವರು, ಗಡಿ ಮೂಲಕ ದೇಶಕ್ಕೆ ಪ್ರವೇಶಿಸುವವರಿಗೆ ಕಡಿವಾಣ ಹಾಕಲಾಗುವುದು ಎಂದರು. ಅಕ್ರಮವಾಗಿ ಬಂದವರು ಒಂದಕ್ಕಿಂತ ಹೆಚ್ಚು ವಿವಾಹವಾಗುವ ಪದ್ಧತಿಗೆ ಹೊಸ ಕಾಯ್ದೆಯ ಮೂಲಕ ಬ್ರೇಕ್ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು. ಇಷ್ಟೆಲ್ಲಾ ಬದಲಾವಣೆಗಳ ನಡುವೆ, ಆದಿವಾಸಿ ಸಮುದಾಯಗಳಿಗೆ ಯುಸಿಸಿಯಿಂದ ವಿನಾಯಿತಿ ನೀಡಲಾಗುವುದು ಎಂಬ ಮಹತ್ವದ ಭರವಸೆಯನ್ನು ಶಾ ನೀಡಿದ್ದಾರೆ. ಬುಡಕಟ್ಟು ಜನರ ವಿಶಿಷ್ಟ ಸಂಪ್ರದಾಯಗಳು ಮತ್ತು ಆಚರಣೆಗಳಿಗೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳಲು ಸಮ್ಮತಿಸಲಾಗಿದ್ದು, ಅವರನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

