ಬೆಂಗಳೂರಿನ (Bengaluru) ತಂತ್ರಜ್ಞಾನ ಲೋಕದ ರಾಜಧಾನಿ ಎನಿಸಿಕೊಂಡಿರುವ ಕರ್ನಾಟಕದ ಶಕ್ತಿ ಕೇಂದ್ರ 'ವಿಧಾನಸೌಧ' (Vidhana Soudha) ಈಗ ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳಲು ಸಜ್ಜಾಗಿದೆ. ಕಳೆದ ಒಂದು ದಶಕದಿಂದ ನೆನೆಗುದಿಗೆ ಬಿದ್ದಿದ್ದ ಬಹುನಿರೀಕ್ಷಿತ 'ಇ-ವಿಧಾನ' (e-Vidhan) ಯೋಜನೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಮುಂಬರುವ ಅಧಿವೇಶನದಿಂದಲೇ ಕಾಗದ ರಹಿತ (Paperless) ಕಲಾಪ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.
ಖಾದರ್ (UT Khader) ತಿಳಿಸಿದ್ದಾರೆ. ಹತ್ತು ವರ್ಷಗಳ ಕಾಯುವಿಕೆಗೆ ಅಂತ್ಯ ಐಟಿ ಕ್ರಾಂತಿಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕ, ತನ್ನ ವಿಧಾನಮಂಡಲ ಕಲಾಪಗಳನ್ನು ಡಿಜಿಟಲೀಕರಣ ಮಾಡುವಲ್ಲಿ ವಿಳಂಬ ಧೋರಣೆ ತೋರುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿದ್ದವು. ಆರ್ಥಿಕವಾಗಿ ಹಿಂದುಳಿದ ಹಲವು ರಾಜ್ಯಗಳು ಈಗಾಗಲೇ ಪೇಪರ್-ಲೆಸ್ ಕಲಾಪ ಅಳವಡಿಸಿಕೊಂಡಿದ್ದರೂ, ಪ್ರಗತಿಶೀಲ ರಾಜ್ಯ ಕರ್ನಾಟಕಕ್ಕೆ ಇದು ಸಾಧ್ಯವಾಗಿರಲಿಲ್ಲ. ಇದೀಗ ಆ ಅಪವಾದವನ್ನು ಅಳಿಸಲು ಸರ್ಕಾರ ಮುಂದಾಗಿದ್ದು, ಶಾಸಕರಿಗೆ ಕಲಾಪದ ಎಲ್ಲ ಮಾಹಿತಿಗಳನ್ನು ತಕ್ಷಣವೇ ಡಿಜಿಟಲ್ ರೂಪದಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಏನಿದು 'ಒಂದು ರಾಷ್ಟ್ರ, ಒಂದು ಅಪ್ಲಿಕೇಶನ್'? ಈ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್' (NeVA) ಅಡಿಯಲ್ಲಿ ಜಾರಿಯಾಗುತ್ತಿದೆ. ದೇಶದ ಎಲ್ಲ ರಾಜ್ಯಗಳ ವಿಧಾನಮಂಡಲ ಕಲಾಪಗಳನ್ನು ಸಂಸತ್ತಿನ ಮಾದರಿಯಲ್ಲಿ ಏಕರೂಪದ ಡಿಜಿಟಲ್ ವೇದಿಕೆಗೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದ ಅನುದಾನ ಹಂಚಿಕೆಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸುತ್ತಿವೆ. ಕರ್ನಾಟಕದ ಅಗತ್ಯಕ್ಕೆ ತಕ್ಕಂತೆ ಈ ಆಯಪ್ ಅನ್ನು ಸಿದ್ಧಪಡಿಸಲಾಗಿದ್ದು (Customized), ಇನ್ಮುಂದೆ ಶಾಸಕರ ಮೇಜಿನ ಮೇಲಿರುವ ರಾಶಿ ರಾಶಿ ಕಾಗದದ ಕಡತಗಳ ಬದಲಿಗೆ ಟ್ಯಾಬ್ಲೆಟ್ ಅಥವಾ ಸ್ಕ್ರೀನ್ಗಳು ಕಾಣಿಸಿಕೊಳ್ಳಲಿವೆ. ಯೋಜನೆಯ ಅಂತಿಮ ಹಂತದ ಪರಿಶೀಲನೆಗಾಗಿ ಕೇಂದ್ರದ ಅಧಿಕಾರಿಗಳ ತಂಡ ಶೀಘ್ರದಲ್ಲೇ ಬೆಂಗಳೂರು ಮತ್ತು ಬೆಳಗಾವಿಯ ಉಭಯ ಸದನಗಳಿಗೆ ಭೇಟಿ ನೀಡಲಿದೆ. ಯೋಜನಾ ವೆಚ್ಚವನ್ನು ಅಂತಿಮಗೊಳಿಸಿ, ಮುಂದಿನ ಮೂರು ತಿಂಗಳೊಳಗೆ ಸಂಪೂರ್ಣವಾಗಿ ಕಾಗದ ರಹಿತ ವ್ಯವಸ್ಥೆಯನ್ನು ಜಾರಿಗೆ ತರಲು ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.

