Dailyhunt Logo
  • Light mode
    Follow system
    Dark mode
    • Play Story
    • App Story
BREAKING NEWS : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಟ್ಟಿ ರಿಲೀಸ್: ಬಿ.ಕೆ. ಹರಿಪ್ರಸಾದ್ ಸೇರಿ ನಾಲ್ವರಿಗೆ ಖರ್ಗೆ ಗ್ರೀನ್ ಸಿಗ್ನಲ್!

BREAKING NEWS : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಟ್ಟಿ ರಿಲೀಸ್: ಬಿ.ಕೆ. ಹರಿಪ್ರಸಾದ್ ಸೇರಿ ನಾಲ್ವರಿಗೆ ಖರ್ಗೆ ಗ್ರೀನ್ ಸಿಗ್ನಲ್!

Navasamaja.com 1 week ago

ವದೆಹಲಿ : ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪದಗ್ರಹಣ ಮಾಡುತ್ತಿದ್ದಂತೆ ಇತ್ತ ಶಾಸಕರಿಂದ ಆಯ್ಕೆಯಾಗುವ ಕರ್ನಾಟಕ ವಿಧಾನ ಪರಿಷತ್‌ನ (Vidhana parishad) ದ್ವೈವಾರ್ಷಿಕ ಚುನಾವಣೆಗೆ (Biennial Elections) ಕಾಂಗ್ರೆಸ್ ಹೈಕಮಾಂಡ್ ತನ್ನ (Congress) ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಘಟಕದಿಂದ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ನಾಲ್ವರು ಪ್ರಮುಖ ನಾಯಕರ ಉಮೇದುವಾರಿಕೆಗೆ ಅಂತಿಮ ಮುದ್ರೆ ಒತ್ತಿದ್ದಾರೆ.

ಈ ಹೈ-ಪ್ರೊಫೈಲ್ ಪಟ್ಟಿಯಲ್ಲಿ ಮೊದಲ ಹೆಸರಾಗಿ ರಾಷ್ಟ್ರ ರಾಜಕಾರಣದಲ್ಲೂ ಗುರುತಿಸಿಕೊಂಡಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಕೆಲವು ಸಮಯದಿಂದ ಪಕ್ಷದ ಆಂತರಿಕ ವಲಯದಲ್ಲಿ ಸಣ್ಣಪುಟ್ಟ ಅಸಮಾಧಾನ ಹೊಂದಿದ್ದ ಬಿ.ಕೆ. ಹರಿಪ್ರಸಾದ್ ಅವರಿಗೆ ಹೈಕಮಾಂಡ್ ಮತ್ತೆ ಪರಿಷತ್ ಟಿಕೆಟ್ ನೀಡುವ ಮೂಲಕ ಅವರನ್ನು ಸಮಾಧಾನಪಡಿಸುವ ಜೊತೆಗೆ ಹಿರಿಯ ನಾಯಕತ್ವಕ್ಕೆ ಗೌರವ ನೀಡುವ ತಂತ್ರವನ್ನು ಮಲ್ಲಿಕಾರ್ಜುನ ಖರ್ಗೆ ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಇವರೊಂದಿಗೆ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರಾದ ತಿಪ್ಪಣ್ಣಪ್ಪ ಕಮಕನೂರ್ ಅವರಿಗೂ ಕಾಂಗ್ರೆಸ್ ಮತ್ತೊಮ್ಮೆ ಕಣಕ್ಕಿಳಿಯಲು ಹಸಿರು ನಿಶಾನೆ ತೋರಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷದ ಸಂಘಟನೆಗೆ ಶ್ರಮಿಸಿರುವ ತಿಪ್ಪಣ್ಣಪ್ಪ ಅವರಿಗೆ ಟಿಕೆಟ್ ನೀಡಿರುವುದು ಮುಂಬರುವ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನುಳಿದಂತೆ ಕರಾವಳಿ ಭಾಗದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಮತ್ತು ಮುಂಚೂಣಿ ನಾಯಕರಾಗಿ ಸುದೀರ್ಘ ಕಾಲದಿಂದ ಗುರುತಿಸಿಕೊಂಡಿರುವ ಪಿ.ವಿ. ಮೋಹನ್ ಅವರಿಗೆ ಹೈಕಮಾಂಡ್ ಈ ಬಾರಿ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ನೆಲೆಯನ್ನು ಭದ್ರಪಡಿಸಿಕೊಳ್ಳುವ ದೃಷ್ಟಿಯಿಂದ ಪಿ.ವಿ. ಮೋಹನ್ ಅವರ ಆಯ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.

ಇವರ ಜೊತೆಗೆ ಹಳೆಯ ಮೈಸೂರು ಭಾಗದ ಮಳವಳ್ಳಿಯ ಪ್ರಮುಖ ದಲಿತ ನಾಯಕರಾದ ಶಿವಣ್ಣ ಮಳವಳ್ಳಿ ಅವರಿಗೂ ಕೂಡ ಪರಿಷತ್ ಟಿಕೆಟ್ ಭಾಗ್ಯ ಒಲಿದುಬಂದಿದೆ. ಮಳವಳ್ಳಿ ಭಾಗದಲ್ಲಿ ಸಾಮಾಜಿಕ ಹೋರಾಟಗಳು ಮತ್ತು ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಶಿವಣ್ಣ ಅವರಿಗೆ ಮಣೆ ಹಾಕಿರುವುದು ಹೈಕಮಾಂಡ್ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿರುವುದನ್ನು ಸಾಬೀತುಪಡಿಸಿದೆ. ಒಟ್ಟಾರೆಯಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜ್ಯಾಭಿಷೇಕದ ಬೆನ್ನಲ್ಲೇ ಹೊರಬಿದ್ದಿರುವ ಹೈಕಮಾಂಡ್‌ನ ಈ ನಾಲ್ವರ ಪಟ್ಟಿ ಸದ್ಯ ರಾಜ್ಯ ರಾಜಕೀಯದ ಕಾರಿಡಾರ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja