ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಈಗ ಕರ್ನಾಟಕ ಬಿಜೆಪಿಯಲ್ಲಿ (Bjp) ಸಂಚಲನ ಮೂಡಿಸಿವೆ. ಜೂನ್ ಮಧ್ಯಭಾಗದಲ್ಲಿ ನರೇಂದ್ರ ಮೋದಿ (PM Modi) ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ (Cabinet) ಭಾರಿ ಬದಲಾವಣೆಗಳಾಗುವ ಮುನ್ಸೂಚನೆ ಸಿಕ್ಕಿದ್ದು, ಮುಂಬರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ದೃಷ್ಟಿಯಿಂದ ಕೆಲವು ಸಚಿವರನ್ನು ಕೈಬಿಡುವ ಸಾಧ್ಯತೆಯಿದೆ.
ಈ ಪ್ರಕ್ರಿಯೆಯ ಭಾಗವಾಗಿ ಕರ್ನಾಟಕದ ಪ್ರಮುಖ ನಾಯಕರಿಗೂ ಹೊಸ ಜವಾಬ್ದಾರಿ ಸಿಗುವ ಲಕ್ಷಣಗಳು ಕಾಣಿಸುತ್ತಿವೆ.ಸದ್ಯ ಕೇಂದ್ರ ಸರ್ಕಾರದಲ್ಲಿ ಗುರುತಿಸಿಕೊಂಡಿರುವ ಕರ್ನಾಟಕದ ಪ್ರಮುಖ ಬಿಜೆಪಿ ಸಚಿವರ ಪೈಕಿ ಒಬ್ಬರನ್ನು ಮಂತ್ರಿಮಂಡಲದಿಂದ ಬಿಡುಗಡೆಗೊಳಿಸಿ, ಅವರಿಗೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಡಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ.
ಬಹುಕಾಲದಿಂದ ಬಾಕಿ ಉಳಿದಿರುವ ಈ ನೇಮಕಾತಿ ಪ್ರಕ್ರಿಯೆಗೆ ಈಗ ಕಾಲ ಕೂಡಿಬಂದಿದ್ದು, ಪ್ರಹ್ಲಾದ್ ಜೋಶಿ ಮತ್ತು ವಿ. ಸೋಮಣ್ಣ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ನಾಯಕರ ರಾಜ್ಯ ಭೇಟಿಯ ಬೆನ್ನಲ್ಲೇ ಈ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ. ಸಂಪುಟ ಪುನಾರಚನೆಯಲ್ಲಿ ಯಾರಿಗೆ ಮಂತ್ರಿಗಿರಿ ತಪ್ಪಲಿದೆ ಮತ್ತು ಆ ಪೈಕಿ ಯಾರಿಗೆ ರಾಜ್ಯ ಸಾರಥ್ಯದ ಅದೃಷ್ಟ ಒಲಿಯಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.

