ಬೆಂಗಳೂರು: ಸಿಟಿ ಕೋರ್ಟ್ನ ಪಬ್ಲಿಕ್ ಪ್ರಾಸಿಕ್ಯೂಟರ್ (ಸರ್ಕಾರಿ ಅಭಿಯೋಜಕರು) ದೂರುದಾರ ಬಳಿ ಐದು ಸಾವಿರ ರೂಪಾಯಿ ಲಂಚ (Corruption) ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಸೋಮವಾರ ನಡೆದಿದೆ.
ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದ ಮಹಿಳಾ ಅಧಿಕಾರಿಯನ್ನು ಸವಿತಾ ನವೀನ್ ಪಾಟೀಲ್ (55) ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಸಿಸಿಎಚ್-54 ರಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ಏನಿದು ಘಟನೆ?
ಲೋಕಾಯುಕ್ತ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಹಿಂದೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಬನಶಂಕರಿ ನಿವಾಸಿಯೊಬ್ಬರು ಸವಿತಾ ಅವರ ಬಳಿ ಬಂದಿದ್ದಾರೆ. ಈ ಸಮಯದಲ್ಲಿ ಸವಿತಾ ಪಾಟೀಲ್ ಅವರು ಐದು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪ ಕೇಳಿ ಬಂದಿತ್ತು. ಆದರೆ ಲಂಚ ನೀಡುವ ಬದಲಾಗಿ ಆ ನಿವಾಸಿ ತಕ್ಷಣವೇ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ದೂರುದಾರರ ಮಾಹಿತಿಯ ಮೇರೆಗೆ ರಂಗಕ್ಕಿಳಿದ ಲೋಕಾಯುಕ್ತ ಅಧಿಕಾರಿಗಳ ತಂಡ, ದೂರುದಾರರಿಂದ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಸವಿತಾ ಪಾಟೀಲ್ ಅವರನ್ನು ಸುತ್ತುವರೆದು ವಶಕ್ಕೆ ಪಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಸದ್ಯ ಆರೋಪಿ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7(ಎ) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದ್ದು, ಲೋಕಾಯುಕ್ತ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದ ಹೆಸ್ಕಾಂ ಶಾಖಾಧಿಕಾರಿ ಲೋಕಾಯುಕ್ತ ಬಲೆಗೆ!
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ (Lokayukta) ಪೊಲೀಸರು (Police) ತಮ್ಮ ಭರ್ಜರಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ವಿದ್ಯುತ್ ಸಂಪರ್ಕ ಕಾಮಗಾರಿಯ ಅಂದಾಜು ಪತ್ರಿಕೆ (Estimate Copy) ಸಿದ್ಧಪಡಿಸಿಕೊಡಲು ಸರ್ಕಾರಿ ಗುತ್ತಿಗೆದಾರರೊಬ್ಬರಿಂದ 25 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಬೆಳಗಾವಿಯ (Belagavi) ಕಲ್ಲೋಳ್ಳಿ ಗ್ರಾಮದ ಹೆಸ್ಕಾಂ (HESCOM) ಶಾಖಾಧಿಕಾರಿ ಮಾರುತಿ ಮೇಟಿ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಹಣದ ಸಮೇತ (Red-handed) ಬಂಧಿಸಿದ್ದಾರೆ.
ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ನಿವಾಸಿಯಾಗಿರುವ ಕ್ಲಾಸ್-1 ವಿದ್ಯುತ್ ಗುತ್ತಿಗೆದಾರರಾದ ಪ್ರೀತಿ ಬಾಗಿ ಅವರು ನಿಯಮಾನುಸಾರ ಮೂರು ಪ್ರತ್ಯೇಕ ಸ್ಥಳಗಳ ಪರಿಶೀಲನೆ ನಡೆಸಿ ಅಂದಾಜು ಪತ್ರಿಕೆ ನೀಡುವಂತೆ ಹೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅಧಿಕೃತ ಕೆಲಸವನ್ನು ಮಾಡಿಕೊಡಲು ಶಾಖಾಧಿಕಾರಿ ಮಾರುತಿ ಮೇಟಿ 25,000 ರೂಪಾಯಿ ಲಂಚ ನೀಡುವಂತೆ ಪಟ್ಟು ಹಿಡಿದಿದ್ದನು. ಭ್ರಷ್ಟ ಅಧಿಕಾರಿಗೆ ಲಂಚ ನೀಡಲು ಇಷ್ಟವಿಲ್ಲದ ಗುತ್ತಿಗೆದಾರರು, ತಕ್ಷಣವೇ ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದರು.
ಗುತ್ತಿಗೆದಾರರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ (SP) ಪ್ರಸನ್ನ ದೇಸಾಯಿ ಅವರ ನೇರ ಮಾರ್ಗದರ್ಶನದಲ್ಲಿ ವಿಶೇಷ ತಂತ್ರ ರೂಪಿಸಲಾಗಿತ್ತು. ಲೋಕಾಯುಕ್ತ ಇನ್ಸ್ಪೆಕ್ಟರ್ ಸಂಗಮನಾಥ ಎಚ್. ಹೊಸಮನಿ ನೇತೃತ್ವದ ವಿಶೇಷ ತನಿಖಾ ತಂಡವು ಇಂದು ಹೆಸ್ಕಾಂ ಕಚೇರಿ ಬಳಿ ಸದ್ದಿಲ್ಲದೆ ನಿಗಾ ಇಟ್ಟಿತ್ತು. ದೂರುದಾರರಿಂದ ಅಧಿಕಾರಿ ಮಾರುತಿ ಮೇಟಿ ಲಂಚದ ಹಣವನ್ನು ಕೈಗೆ ಪಡೆದುಕೊಳ್ಳುತ್ತಿದ್ದಂತೆಯೇ ದಾಳಿ ನಡೆಸಿದ ಪೊಲೀಸರು, ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕೆಮಿಕಲ್ ಪರೀಕ್ಷೆ ನಡೆಸಿದಾಗ ಲಂಚದ ಹಣ ಪಡೆದಿರುವುದು ಸಾಬೀತಾಗಿದೆ.
ಇದನ್ನೂ ಒದಿ: ಬಿಲ್ ಪಾಸ್ ಮಾಡಲು ಲಂಚಕ್ಕೆ ಬೇಡಿಕೆ, ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು

