ಬಳ್ಳಾರಿ: ಕಾಲೇಜು ವಿದ್ಯಾರ್ಥಿಗಳಿಗೆ (Students) ಆದರ್ಶವಾಗಿರಬೇಕಾದ ಉಪನ್ಯಾಸಕನೊಬ್ಬ, ತನ್ನ ಬಳಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನೇ (Minor Girl) ದಾರಿ ತಪ್ಪಿಸಿ ಲೈಂಗಿಕವಾಗಿ (Crime) ಬಳಸಿಕೊಂಡಿರುವ ನಾಚಿಕೆಗೇಡು ಘಟನೆ ಗಣಿ ನಾಡು ಬಳ್ಳಾರಿಯಲ್ಲಿ (Ballary) ನಡೆದಿದೆ.
ತನಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ಆ ಸತ್ಯವನ್ನು ಮುಚ್ಚಿಟ್ಟು ಹುಡುಗಿಯ ಭವಿಷ್ಯದ ಜೊತೆ ಆಟವಾಡಿದ ಕಿರಾತಕನನ್ನು ಮಹಿಳಾ ಠಾಣೆಯ ಪೊಲೀಸರು ಕಡ್ಡಾಯವಾಗಿ ಕಂಬಿ ಎಣಿಸುವಂತೆ ಮಾಡಿದ್ದಾರೆ. ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ (ಬೊಟಾನಿ) ಪಾಠ ಮಾಡುತ್ತಿದ್ದ ರವಿಕಿರಣ್ ಎಂಬಾತನೇ ಸದ್ಯ ಪೊಲೀಸರ ಅತಿಥಿಯಾಗಿರುವ ಕಾಮುಕ ಉಪನ್ಯಾಸಕ. ಈತ ತನ್ನದೇ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯನ್ನು ಜಾಲಕ್ಕೆ ಬೀಳಿಸಿಕೊಂಡಿದ್ದನು. ಕಳೆದ ವರ್ಷ ಅಂದರೆ 2025 ರಲ್ಲಿ ಇವರ ನಡುವೆ ಕಾಲೇಜು ಆವರಣದಲ್ಲೇ ಪರಿಚಯ ಶುರುವಾಗಿತ್ತು. ಆನಂತರ ವಿದ್ಯಾರ್ಥಿನಿಗೆ ಹತ್ತಿರವಾದ ರವಿಕಿರಣ್, ಪ್ರೀತಿಯ ಜಾಲ ಹೆಣೆದಿದ್ದನು. ಪೋಷಕರು ಮತ್ತು ಸಮಾಜದ ಕಣ್ಣು ತಪ್ಪಿಸಿ, "ನಿನ್ನನ್ನು ಬಿಟ್ಟು ನಾನಿರಲ್ಲ, ನಿನ್ನನ್ನೇ ಮದುವೆಯಾಗುತ್ತೇನೆ" ಎಂದು ನಂಬಿಸಿ, ಜನರಿಲ್ಲದ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ಆದರೆ, ದಿನಗಳು ಕಳೆದಂತೆ ಉಪನ್ಯಾಸಕ ರವಿಕಿರಣ್ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿರುವ ಘೋರ ಸತ್ಯ ವಿದ್ಯಾರ್ಥಿನಿಗೆ ಗೊತ್ತಾಗಿದೆ. ತನಗೆ ಆದ ವಂಚನೆಯನ್ನು ಕಂಡು ಆಕೆ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ತಡ ಮಾಡದೆ ಪೋಷಕರು ನೇರವಾಗಿ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಲಿಖಿತ ದೂರು ನೀಡಿದ್ದಾರೆ. ದೂರನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಪೊಲೀಸರು, ಆರೋಪಿ ವಿರುದ್ಧ ಪೋಕ್ಸೋ (POCSO) ಮತ್ತು ಲೈಂಗಿಕ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಊರು ಬಿಟ್ಟು ಓಡಿಹೋಗಲು ಸ್ಕೆಚ್ ಹಾಕುತ್ತಿದ್ದ ರವಿಕಿರಣ್ನನ್ನು ಪೊಲೀಸರು ಬೆನ್ನಟ್ಟಿ ಹಿಡಿದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.

