ಶಿವಮೊಗ್ಗ : ಜಿಲ್ಲೆಯ (Shimoga) ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ತಟ್ಟೆಕೊಡ್ಲು ಗ್ರಾಮದಲ್ಲಿ ನಿರಂತರವಾದ ದೈಹಿಕ ಅಸ್ವಸ್ಥತೆಯಿಂದ ತೀವ್ರ ಮಾನಸಿಕ ಖಿನ್ನತೆಗೆ (Dipression) ಒಳಗಾಗಿದ್ದ ರಾಮಚಂದ್ರ ರಾವ್ ಎಂಬ ಎಂಬತ್ತೈದು ವರ್ಷದ ಹಿರಿಯ ವ್ಯಕ್ತಿ ಗುಂಡು ಹಾರಿಸಿಕೊಂಡು (Gun shot) ಪ್ರಾಣ ಕಳೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದಿದ್ದ ಅವರಿಗೆ, ಅಂದಿನಿಂದ ನಿರಂತರವಾಗಿ ತಲೆನೋವಿನ ಸಮಸ್ಯೆ ಕಾಡುತ್ತಿತ್ತು. ಈ ನಿಟ್ಟಿನಲ್ಲಿ ಅವರು ಸ್ಥಳೀಯ ವೈದ್ಯರಿಂದ ಅಗತ್ಯ ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದರು. ಆದಾಗ್ಯೂ, ನೋವು ಕಡಿಮೆಯಾಗದ ಕಾರಣ ಅವರು ತೀವ್ರವಾಗಿ ಮನನೊಂದಿದ್ದರು. ಎಂದಿನಂತೆ ರಾತ್ರಿ ತಮ್ಮ ಕುಟುಂಬ ಸದಸ್ಯರೊಂದಿಗೆ ಸಾಮಾನ್ಯ ಮಾತುಕತೆ ನಡೆಸಿ, ತಾಂಬೂಲ ಸೇವಿಸಿದ ನಂತರ ಅವರು ತಮ್ಮ ಕೋಣೆಗೆ ಮಲಗಲು ತೆರಳಿದ್ದರು.
ಆದರೆ, ಮಧ್ಯರಾತ್ರಿಯ ಸುಮಾರಿಗೆ ಕೋಣೆಯ ಒಳಗಿನಿಂದ ಹಠಾತ್ ಆಗಿ ಭಾರಿ ಶಬ್ದ ಕೇಳಿಬಂದಿದೆ. ಗಾಬರಿಗೊಂಡ ಮನೆಯವರು ತಕ್ಷಣವೇ ಹೋಗಿ ನೋಡಿದಾಗ, ವೃದ್ಧರು ತಮ್ಮಲ್ಲಿದ್ದ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಶೂಟ್ ಮಾಡಿಕೊಂಡು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿರುವುದು ಬೆಳಕಿಗೆ ಬಂದಿದೆ.
ಗುಂಡಿನ ಏಟಿಗೆ ತಲೆಯ ಭಾಗ ಸಂಪೂರ್ಣವಾಗಿ ಛಿದ್ರಗೊಂಡಿತ್ತು. ಘಟನೆಯ ಕುರಿತು ಮಾಹಿತಿ ಪಡೆದ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಘಟನೆಗೆ ನಿಖರವಾದ ಕಾರಣಗಳನ್ನು ಪತ್ತೆಹಚ್ಚಲು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

