ಮೈಸೂರು: ಆಹಾರ ಮತ್ತು ನೀರು ಹುಡುಕಿಕೊಂಡು ಜಿಂಕೆಯೊಂದು (Deer ) ಕಾಡಿನಿಂದ (Forest ) ನಾಡಿಗೆ ಬಂದು ಆಕಸ್ಮಿಕವಾಗಿ 15 ಅಡಿ ಆಳದ ತೆರೆದ ಬಾವಿಗೆ (Well) ಬಿದ್ದ ಘಟನೆ ಹೆಡೆತಲೆ ಗ್ರಾಮದಲ್ಲಿ ನಡೆದಿದೆ.
ಬಾವಿಯೊಳಗೆ ಬಿದ್ದು ಮೇಲೆ ಬರಲಾಗದೆ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಮೂಕಪ್ರಾಣಿಯನ್ನು ಕಂಡು ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಜಂಟಿ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿದೆ. 15 ಅಡಿ ಆಳದ ಬಾವಿಗೆ ಹಗ್ಗದ ಸಹಾಯದಿಂದ ಇಳಿದ ಸಿಬ್ಬಂದಿ, ತೀವ್ರ ಗಾಬರಿಗೊಂಡಿದ್ದ ಜಿಂಕೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಪ್ರಾಣಿಗೆ ಯಾವುದೇ ಹಾನಿಯಾಗದಂತೆ ಅತ್ಯಂತ ಜಾಗರೂಕತೆಯಿಂದ ರಕ್ಷಣಾ ಬಲೆಯನ್ನು (Rescue Net) ಬಳಸಿ ಅದಕ್ಕೆ ಕಟ್ಟಲಾಯಿತು. ನಂತರ ಮೇಲಿದ್ದ ಸಿಬ್ಬಂದಿ ಮತ್ತು ಸ್ಥಳೀಯರು ಒಟ್ಟಾಗಿ ಹಗ್ಗವನ್ನು ಎಳೆಯುವ ಮೂಲಕ ಜಿಂಕೆಯನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಈ ರೋಚಕ ಕಾರ್ಯಾಚರಣೆಯು ಯಶಸ್ವಿಯಾಗಿದ್ದು, ಇಡೀ ಪ್ರಕ್ರಿಯೆಯಲ್ಲಿ ಜಿಂಕೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾವಿಯಿಂದ ಹೊರತಂದ ಜಿಂಕೆಗೆ ವನ್ಯಜೀವಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಸದ್ಯ ಜಿಂಕೆಯು ಆರೋಗ್ಯವಾಗಿದ್ದು, ಅದನ್ನು ಮರಳಿ ಸುರಕ್ಷಿತವಾಗಿ ಸಮೀಪದ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಸಕಾಲದಲ್ಲಿ ಸ್ಪಂದಿಸಿ ಜೀವ ಉಳಿಸಿದ ರಕ್ಷಣಾ ತಂಡ ಮತ್ತು ಸ್ಥಳೀಯರ ಮಾನವೀಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

