ಬೆಂಗಳೂರು: ಪ್ರಪಂಚವೇ ಇಂದು ನಮ್ಮ ರಾಜಧಾನಿ ಬೆಂಗಳೂರಿನತ್ತ (Bengaluru) ಆಸಕ್ತಿಯಿಂದ ನೋಡುತ್ತಿದೆ. ನಮ್ಮ ಸರ್ಕಾರ ಕೇವಲ ಬೆಂಗಳೂರಿನ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿಲ್ಲ, ಟೀಮ್ ಬೆಂಗಳೂರು (Team Bengaluru) ಎಂಬುದನ್ನು ದಾಟಿ ಟೀಮ್ ಕರ್ನಾಟಕ ಅಂತಾ ರಾಜ್ಯದ ಪ್ರಗತಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.
ಶಿವಕುಮಾರ್ (DK Shivakumar) ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗತಿಕ ಹೂಡಿಕೆದಾರರ ಪ್ರಮುಖ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಕೈಗಾರಿಕಾ ಪ್ರಗತಿ ಹಾಗೂ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಹಲವು ಐತಿಹಾಸಿಕ ನಿರ್ಧಾರಗಳನ್ನು ಪ್ರಕಟಿಸಿದರು. ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ, ಬಹಳ ಸಂತೋಷ ರಾಜ್ಯದಲ್ಲಿ ಹೂಡಿಕೆ ಮಾಡಲು ಬಂದಿರುವ ಜಾಗತಿಕ ಕಂಪನಿಗಳ ಮುಖ್ಯಸ್ಥರ ಒಕ್ಕೂಟದ ಕುರಿತು ಮಾತನಾಡಿದ ಸಿಎಂ, ಇಂದಿನ ಮಹತ್ವದ ಸಭೆಯಲ್ಲಿ ಜಗತ್ತಿನ ವಿವಿಧ ದೇಶಗಳ ಸುಮಾರು 200ಕ್ಕೂ ಹೆಚ್ಚು ಪ್ರಭಾವಿ ಜಿಸಿಸಿ (GCC - Global Capability Centres) ಮುಖ್ಯಸ್ಥರು ಉತ್ಸಾಹದಿಂದ ಭಾಗಿಯಾಗಿದ್ದರು. ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಏನೆಲ್ಲಾ ಸುಧಾರಣೆಗಳು ಆಗಬೇಕು ಮತ್ತು ಕೈಗಾರಿಕಾ ಪ್ರಗತಿಗೆ ಯಾವ ರೀತಿಯ ಪೂರಕ ವಾತಾವರಣ ನಿರ್ಮಾಣ ಮಾಡಬೇಕು ಎಂಬ ಕುರಿತು ಅವರು ಸರ್ಕಾರಕ್ಕೆ ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಜಾಗತಿಕ ಮಟ್ಟದ ಈ ಉದ್ಯಮಿಗಳು ನಮ್ಮ ಸರ್ಕಾರದ ಆಡಳಿತ ಶೈಲಿ ಹಾಗೂ ನನ್ನ ನಾಯಕತ್ವದ ಮೇಲೂ ಅಪಾರ ನಂಬಿಕೆ ಇಟ್ಟಿದ್ದಾರೆ. ಇದು ನನಗೂ ಬಹಳ ಸಂತೋಷ ತಂದಿದೆ ಎಂದರು. ಕರ್ನಾಟಕದ ಯುವಕರಿಗೆ ಉದ್ಯೋಗ, ದೇಶಕ್ಕೆ ಹೆಮ್ಮೆ ಈ ಜಾಗತಿಕ ಕೇಂದ್ರಗಳು ಕೇವಲ ವ್ಯಾಪಾರ ಮಾಡುತ್ತಿಲ್ಲ, ಬದಲಿಗೆ ನಮ್ಮ ಕರ್ನಾಟಕದ ಲಕ್ಷಾಂತರ ಯುವ ಜನತೆಗೆ ಉನ್ನತ ಮಟ್ಟದ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಮೂಲಕ ರಾಜ್ಯದ ಜೊತೆಗೆ ಇಡೀ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೌರವ ತರುವಂತೆ ಕೆಲಸ ಮಾಡಿದ್ದಾರೆ. ಇವರೆಲ್ಲರೂ ಕೇವಲ ಹೂಡಿಕೆದಾರರಲ್ಲ, ನಮ್ಮ ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಸಮಾನ ಪಾಲುದಾರರಾಗಿ (Partners) ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು. 2-ಟೈರ್, 3-ಟೈರ್ ನಗರಗಳಲ್ಲಿ ಉದ್ಯೋಗ ಸೃಷ್ಟಿಸಿದರೆ ರಿಯಾಯಿತಿ ರಾಜಧಾನಿಯ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ರಾಜ್ಯದ ಇತರೆ ಜಿಲ್ಲೆಗಳಿಗೂ ಐಟಿ-ಬಿಟಿ ಉದ್ಯಮವನ್ನು ವಿಸ್ತರಿಸಲು ಸರ್ಕಾರ ರೂಪಿಸಿರುವ ಬಿಯಾಂಡ್ ಬೆಂಗಳೂರು (Beyond Bengaluru) ಯೋಜನೆಗೆ ಸಿಎಂ ಹೊಸ ವೇಗ ನೀಡಿದ್ದಾರೆ. ಬೆಂಗಳೂರಿನ ಹೊರಗೂ ಕೈಗಾರಿಕೆಗಳನ್ನು ಬೆಳೆಸುವ ಬಗ್ಗೆ ನಾವು ಉದ್ಯಮಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಇದಕ್ಕಾಗಿ ಶೀಘ್ರದಲ್ಲೇ ಅತ್ಯಾಧುನಿಕ ಹಾಗೂ ಉದ್ಯಮ ಸ್ನೇಹಿ ಹೊಸ ಕೈಗಾರಿಕಾ ನೀತಿ (New Policy) ಜಾರಿಗೆ ತರಲು ಆಲೋಚನೆ ಮಾಡಲಾಗಿದೆ. ರಾಜ್ಯದಲ್ಲಿ ಎಐ ಯೂನಿವರ್ಸಿಟಿ ಸ್ಥಾಪನೆಗೆ ಚಿಂತನೆ! ಭವಿಷ್ಯದ ತಂತ್ರಜ್ಞಾನವಾದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಲಯದಲ್ಲಿ ಕರ್ನಾಟಕವನ್ನು ವಿಶ್ವದ ನಾಯಕನನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಪ್ರತ್ಯೇಕ ಎಐ ಯೂನಿವರ್ಸಿಟಿ (AI University - ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ) ಸ್ಥಾಪನೆ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ವಿಶ್ವವಿದ್ಯಾಲಯದ ಸ್ವರೂಪ ಮತ್ತು ಪಠ್ಯಕ್ರಮ ಹೇಗಿರಬೇಕು ಎಂಬ ಕುರಿತು ಇಂದಿನ ಸಭೆಯಲ್ಲಿ ಭಾಗವಹಿಸಿದ್ದ ಜಾಗತಿಕ ತಂತ್ರಜ್ಞಾನ ಪರಿಣಿತರು ಹಾಗೂ ಜಿಸಿಸಿ ಮುಖ್ಯಸ್ಥರ ಬಳಿ ಸಲಹೆಗಳನ್ನು ಕೇಳಿದ್ದೇವೆ. ಅವರು ನೀಡುವ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಯಾರೆಲ್ಲಾ ಉದ್ಯಮಿಗಳು ಬೆಂಗಳೂರನ್ನು ಬಿಟ್ಟು ರಾಜ್ಯದ ಟೂ ಟೈರ್ (2-Tier) ಮತ್ತು ತ್ರೀ ಟೈರ್ (3-Tier) ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ಕೊಡುತ್ತಾರೋ, ಅವರಿಗೆ ಅತ್ಯಂತ ಕಡಿಮೆ ದರದಲ್ಲಿ ಜಾಗ ಮತ್ತು ಕಟ್ಟಡಗಳು ಬಾಡಿಗೆಗೆ ಸಿಗುವಂತೆ ಸರ್ಕಾರವೇ ವ್ಯವಸ್ಥೆ ಮಾಡಿಕೊಡಲಿದೆ. ನಮ್ಮ ನೆಲದಲ್ಲಿ ಯಾರು ಉದ್ಯೋಗ ಸೃಷ್ಟಿ ಮಾಡುತ್ತಾರೋ, ಅವರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯ ಹಾಗೂ ಸಬ್ಸಿಡಿಗಳನ್ನು ಕಲ್ಪಿಸಿಕೊಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು.

