ಛತ್ತೀಸ್ಗಢ: ಆಧುನಿಕ ಜೀವನ ಶೈಲಿ ಮತ್ತು ಕೆಲಸದ ಒತ್ತಡದ ನಡುವೆ ಮನುಷ್ಯರ ಆರೋಗ್ಯ ಹದಗೆಡುತ್ತಿದೆ. ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸೇವಕರಲ್ಲಿ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ, ಛತ್ತೀಸ್ಗಢ ಸರ್ಕಾರವು ಏಪ್ರಿಲ್ 7, 2026 ರಂದು ಒಂದು ಹೊಸ ನೀತಿ ಪ್ರಕಟಿಸಿದೆ.
ಇದರ ಅನ್ವಯ, ರಾಜ್ಯದ ಅಧಿಕಾರಿಗಳು ಮತ್ತು ನೌಕರರು ಮಾನಸಿಕ ನೆಮ್ಮದಿ ಮತ್ತು ಕೆಲಸದ ದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ವಿಪಶ್ಯನಾ (Good News) ಧ್ಯಾನ ಶಿಬಿರಗಳಲ್ಲಿ ಪಾಲ್ಗೊಳ್ಳಲು ವಿಶೇಷ ಸಂಬಳ ಸಹಿತ ರಜೆಯನ್ನು ಪಡೆಯಬಹುದು. ಏನೆಲ್ಲಾ ಇದೆ ಷರತ್ತುಗಳು? ರಜೆಗಾಗಿ ಅರ್ಹತೆ ಪಡೆಯಲು, ಉದ್ಯೋಗಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ವಿಪಶ್ಯನಾ ಕೇಂದ್ರದಿಂದ ಪ್ರವೇಶ ಪತ್ರವನ್ನು ಸಲ್ಲಿಸಬೇಕು. ಹಿಂತಿರುಗಿದ ನಂತರ, ಅವರು ತಮ್ಮ ಇಲಾಖೆಗೆ ಶಿಬಿರ ಪೂರ್ಣಗೊಳಿಸಿದ ಪ್ರಮಾಣಪತ್ರವನ್ನು ಪ್ರಸ್ತುತಪಡಿಸುವುದು ಕಡ್ಡಾಯವಾಗಿದೆ. ಹಾಗೆ ಮಾಡಲು ವಿಫಲವಾದರೆ, ಆ ಗೈರುಹಾಜರಿಯನ್ನು ಅವರ ಇತರ ರಜೆಗಳ ಖಾತೆಗೆ ಸರಿಹೊಂದಿಸಲಾಗುತ್ತದೆ. ಎಲ್ಲಾ ಅರ್ಜಿಗಳು ಸಂಬಂಧಪಟ್ಟ ಇಲಾಖಾ ಅಧಿಕಾರಿಯ ಅನುಮೋದನೆಗೆ ಒಳಪಟ್ಟಿರುತ್ತವೆ ಮತ್ತು ಉದ್ಯೋಗಿಯ ಅನುಪಸ್ಥಿತಿಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗದಂತೆ ಇಲಾಖೆಗಳು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಏನಿದು ವಿಪಶ್ಯನಾ? ವಿಪಶ್ಯನಾ ಎಂದರೆ ವಿಷಯಗಳನ್ನು ಅವು ನಿಜವಾಗಿ ಹೇಗಿವೆಯೋ ಹಾಗೆಯೇ ನೋಡುವುದು ಎಂದರ್ಥ. ಇದು ಭಾರತದ ಅತ್ಯಂತ ಪ್ರಾಚೀನ ಧ್ಯಾನ ತಂತ್ರಗಳಲ್ಲಿ ಒಂದಾಗಿದೆ. ಇದನ್ನು ಸಾಮಾನ್ಯವಾಗಿ ಹತ್ತು ದಿನಗಳ ವಸತಿ ಕೋರ್ಸ್ಗಳ ಮೂಲಕ ಕಲಿಸಲಾಗುತ್ತದೆ. ಈ ಅವಧಿಯಲ್ಲಿ ಭಾಗವಹಿಸುವವರು ಈ ವಿಧಾನದ ಮೂಲಭೂತ ಅಂಶಗಳನ್ನು ಕಲಿಯುತ್ತಾರೆ. ಅದರ ಪ್ರಯೋಜನಗಳನ್ನು ಅನುಭವಿಸಲು ಸಾಕಷ್ಟು ಅಭ್ಯಾಸ ಮಾಡುತ್ತಾರೆ. ಈ ಕೋರ್ಸ್ಗಳನ್ನು ದೇಶಾದ್ಯಂತದ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ.
ಹೊಸ ಆದೇಶದ ಅಡಿಯಲ್ಲಿ, ಅಖಿಲ ಭಾರತ ಸೇವೆ ಮತ್ತು ರಾಜ್ಯ ಸೇವೆಯ ಸಿಬ್ಬಂದಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಪಶ್ಯನಾ ಕೇಂದ್ರಗಳಲ್ಲಿ 10 ದಿನಗಳ ವಸತಿ ಧ್ಯಾನ ಶಿಬಿರಗಳಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ಪ್ರತಿಯೊಬ್ಬ ಉದ್ಯೋಗಿಯು ತನ್ನ ವೃತ್ತಿಜೀವನದ ಅವಧಿಯಲ್ಲಿ ಆರು ಬಾರಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಉದ್ಯೋಗಿಗಳಿಗೆ ಪ್ರಯಾಣದ ಸಮಯ ಸೇರಿದಂತೆ ಪ್ರತಿ ಶಿಬಿರಕ್ಕೆ 12 ದಿನಗಳವರೆಗೆ ವಿಶೇಷ ಸಾಂದರ್ಭಿಕ ರಜೆಯನ್ನು ನೀಡಲಾಗುತ್ತದೆ. ಈ ಅವಧಿಯಲ್ಲಿ ಅವರನ್ನು ಕರ್ತವ್ಯದ ಮೇಲೆ (on duty) ಎಂದು ಪರಿಗಣಿಸಲಾಗುತ್ತದೆ ಮತ್ತು ಅವರು ತಮ್ಮ ಪೂರ್ಣ ಸಂಬಳವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಆದರೆ, ಯಾವುದೇ ಪ್ರಯಾಣ ಭತ್ಯೆ ಅಥವಾ ಹೆಚ್ಚುವರಿ ವೆಚ್ಚಗಳನ್ನು ಸರ್ಕಾರ ಮರುಪಾವತಿಸುವುದಿಲ್ಲ ಮತ್ತು ಎಲ್ಲಾ ವೆಚ್ಚಗಳನ್ನು ಉದ್ಯೋಗಿಯೇ ವೈಯಕ್ತಿಕವಾಗಿ ಭರಿಸಬೇಕಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

