ಮಧ್ಯಪ್ರಾಚ್ಯದಲ್ಲಿ (Middle East War) ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ (Iran) ಮೇಲೆ ದಾಳಿ ನಡೆಸಿದ ನಂತರ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಈ ಯುದ್ಧದ ಬಿಕ್ಕಟ್ಟಿನಿಂದಾಗಿ ವಿಶ್ವದ ಪ್ರಮುಖ ಹಡಗು ಮಾರ್ಗವಾದ 'ಹಾರ್ಮುಜ್ ಜಲಸಂಧಿ' (Strait of Hormuz) ಅಸ್ತವ್ಯಸ್ತಗೊಂಡಿದ್ದು, ಭಾರತದ ಇಂಧನ ಭದ್ರತೆಯ ಬಗ್ಗೆ ಆತಂಕ ಮೂಡಿತ್ತು.
ಈ ನಡುವೆ ಇರಾನ್ ಸರ್ಕಾರವು ಭಾರತಕ್ಕೆ ಮಹತ್ವದ ಭರವಸೆಯೊಂದನ್ನು ನೀಡುವ ಮೂಲಕ ನಿಟ್ಟುಸಿರು ಬಿಡುವಂತೆ ಮಾಡಿದೆ. ವಿಶ್ವದ ಒಟ್ಟು ಇಂಧನ ಸಾಗಣೆಯ ಶೇಕಡಾ 20 ರಷ್ಟು ಪಾಲು ಹೊಂದಿರುವ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಸಂಪೂರ್ಣ ನಿಯಂತ್ರಣ ಹೊಂದಿದೆ. ಯುದ್ಧದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದ್ದರೂ, ಭಾರತದ ಹಡಗುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಇರಾನ್ ಘೋಷಿಸಿದೆ. "ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದಾರೆ, ಅವರು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ" ಎಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯು ಗುರುವಾರ ತನ್ನ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಸ್ಪಷ್ಟಪಡಿಸಿದೆ. ಸ್ನೇಹಪರ ರಾಷ್ಟ್ರಗಳಿಗೆ ಮಾತ್ರ ಮುಕ್ತ ಅವಕಾಶ ಕಳೆದ ತಿಂಗಳು ಸಂಘರ್ಷ ತೀವ್ರಗೊಂಡಾಗಿನಿಂದ ಇರಾನ್ ಈ ಜಲಸಂಧಿಯಲ್ಲಿ ಇತರ ದೇಶಗಳ ಹಡಗುಗಳ ಸಂಚಾರಕ್ಕೆ ದಿಗ್ಬಂಧನ ವಿಧಿಸಿತ್ತು. ಆದರೆ, ತನ್ನೊಂದಿಗೆ ಉತ್ತಮ ಸಂಬಂಧ ಹೊಂದಿರುವ ಭಾರತ, ಚೀನಾ, ರಷ್ಯಾ, ಇರಾಕ್ ಮತ್ತು ಪಾಕಿಸ್ತಾನದಂತಹ ಸ್ನೇಹಪರ ರಾಷ್ಟ್ರಗಳ ಹಡಗುಗಳಿಗೆ ಮಾತ್ರ ಈ ಮಾರ್ಗದ ಮೂಲಕ ಹಾದುಹೋಗಲು ವಿಶೇಷ ಅನುಮತಿ ನೀಡಿರುವುದಾಗಿ ಇರಾನ್ ತಿಳಿಸಿದೆ. ಇದು ಯುದ್ಧದ ನಡುವೆಯೂ ಭಾರತದ ಆರ್ಥಿಕತೆಗೆ ಅಲ್ಪ ಮಟ್ಟದ ನೆಮ್ಮದಿ ನೀಡುವ ಸುದ್ದಿಯಾಗಿದೆ. ಇರಾನ್ ಭರವಸೆ ನೀಡಿದ್ದರೂ ಸಹ, ಪ್ರಸ್ತುತ ಜಾರಿಯಲ್ಲಿರುವ ಭಾಗಶಃ ದಿಗ್ಬಂಧನವು ಭಾರತ ಸೇರಿದಂತೆ ಹಲವು ದೇಶಗಳಿಗೆ ಇಂಧನ ಪೂರೈಕೆಯಲ್ಲಿ ಅಡಚಣೆ ಉಂಟುಮಾಡಿದೆ. ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಅನಿಲದ (LPG) ಬೆಲೆಗಳಲ್ಲಿ ಏರಿಳಿತ ಕಂಡುಬರುತ್ತಿದೆ. ಜನಸಾಮಾನ್ಯರಲ್ಲಿ ಆತಂಕ ಮನೆಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಭಾಷಣದ ನಂತರ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಮಧ್ಯಪ್ರಾಚ್ಯದ ಈ ಯುದ್ಧದ ಪರಿಸ್ಥಿತಿಯು ಜಾಗತಿಕ ಇಂಧನ ಮಾರುಕಟ್ಟೆಯನ್ನು ಹೇಗೆ ಬದಲಿಸಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದ್ದು, ಭಾರತದ ಹಿತರಕ್ಷಣೆಗೆ ಇರಾನ್ ಮುಂದಾಗಿರುವುದು ರಾಜತಾಂತ್ರಿಕವಾಗಿ ಪ್ರಮುಖ ಹೆಜ್ಜೆಯೆಂದು ಪರಿಗಣಿಸಲಾಗಿದೆ.

