ನವದೆಹಲಿ: ಮಧ್ಯಪ್ರಾಚ್ಯದಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಭದ್ರತಾ ಆತಂಕ ಹಾಗೂ ಇರಾನ್ನಲ್ಲಿನ(Iran) ಇತ್ತೀಚಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು(India Government) ಪ್ರಯಾಣದ ಮಾರ್ಗಸೂಚಿಯನ್ನು (Travel Advisory) ಹೊರಡಿಸಿದೆ.
Advertisement
ಮುಂದಿನ ಸೂಚನೆ ಬರುವವರೆಗೆ ಭಾರತೀಯ ನಾಗರಿಕರು ಯಾರೂ ಸಹ ಇರಾನ್ಗೆ ಯಾವುದೇ ರೀತಿಯ ಅನಿವಾರ್ಯವಲ್ಲದ ಅಥವಾ ಅನಗತ್ಯ ಪ್ರಯಾಣವನ್ನು ಕೈಗೊಳ್ಳಬಾರದು ಎಂದು ವಿದೇಶಾಂಗ ಇಲಾಖೆ ಸೂಚನೆ ನೀಡಿದೆ.
ಇರಾನ್ ಹಾಗೂ ಸುತ್ತಮುತ್ತಲಿನ ವಲಯದಲ್ಲಿ ಪ್ರಸ್ತುತ ನಿರ್ಮಾಣವಾಗಿರುವ ಅಸ್ಥಿರ ವಾತಾವರಣದ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಈ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಈಗಾಗಲೇ ಇರಾನ್ನಲ್ಲಿ ನೆಲೆಸಿರುವ ಭಾರತೀಯ ನಾಗರಿಕರಿಗೂ ಸರ್ಕಾರ ಕೆಲವು ಪ್ರಮುಖ ನಿರ್ದೇಶನಗಳನ್ನು ನೀಡಿದೆ.
ಇರಾನ್ನಲ್ಲಿರುವ ಭಾರತೀಯರಿಗೆ ಸೂಚನೆಗಳೇನು?
ಇರಾನ್ನಲ್ಲಿ ಪ್ರಸ್ತುತ ವಾಸಿಸುತ್ತಿರುವ ಅಥವಾ ಉದ್ಯೋಗದಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ತಕ್ಷಣವೇ ತೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ (Embassy of India in Tehran) ಅಥವಾ ಜಾಹೇದಾನ್ನಲ್ಲಿರುವ ಕಾನ್ಸುಲೇಟ್ ಜನರಲ್ ಕಚೇರಿಯಲ್ಲಿ ತಮ್ಮ ಸಂಪೂರ್ಣ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು. ನಾಗರಿಕರು ರಾಯಭಾರ ಕಚೇರಿಯ ಅಧಿಕೃತ ವೆಬ್ಸೈಟ್ ಮೂಲಕವೂ ತಮ್ಮ ನೋಂದಣಿಯನ್ನು ಪೂರ್ಣಗೊಳಿಸಬಹುದಾಗಿದೆ.
ಅಲ್ಲಿರುವ ಭಾರತೀಯರು ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ರಾಯಭಾರ ಕಚೇರಿಯ ಅಧಿಕೃತ ವೆಬ್ಸೈಟ್ ಹಾಗೂ ಸಾಮಾಜಿಕ ಮಾಧ್ಯಮ ಪುಟಗಳ ಮೂಲಕ ನಿಯಮಿತವಾಗಿ ಹೊರಡಿಸಲಾಗುವ ಇತ್ತೀಚಿನ ಭದ್ರತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಗಮನಿಸುತ್ತಿರಬೇಕು.
ಪ್ರಸ್ತುತ ಇರಾನ್ನಲ್ಲಿರುವ ಭಾರತೀಯರು ಗರಿಷ್ಠ ಮಟ್ಟದ ಜಾಗರೂಕತೆಯನ್ನು ವಹಿಸಬೇಕು ಮತ್ತು ಸ್ಥಳೀಯ ಆಡಳಿತದೊಂದಿಗೆ ಸಹಕರಿಸಬೇಕು. ಅತ್ಯಂತ ಅನಿವಾರ್ಯ ಕಾರಣಗಳ ಹೊರತಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ಸಂಚರಿಸುವುದನ್ನು ಸಂಪೂರ್ಣವಾಗಿ ಕಡಿಮೆ ಮಾಡಬೇಕು ಎಂದು ಸೂಚಿಸಲಾಗಿದೆ.
ನಾಗರಿಕರು ಪಾಲಿಸಬೇಕಾದ ಪ್ರಮುಖ ಅಂಶಗಳು
ತೀರಾ ಅನಿವಾರ್ಯ ಕಾರಣಗಳ ಹೊರತಾಗಿ ಇರಾನ್ಗೆ ಹೋಗುವ ಎಲ್ಲಾ ಯೋಜನೆಗಳನ್ನು ಸದ್ಯಕ್ಕೆ ಮುಂದೂಡಿ.
ಯಾವುದೇ ರೀತಿಯ ತುರ್ತು ಪರಿಸ್ಥಿತಿ ಅಥವಾ ಸಹಾಯದ ಅಗತ್ಯವಿದ್ದಲ್ಲಿ, ತಕ್ಷಣವೇ ತೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬೇಕು.
ಮಧ್ಯಪ್ರಾಚ್ಯದಲ್ಲಿ ಪ್ರಾದೇಶಿಕ ಸಂಘರ್ಷದ ಭೀತಿ ಹೆಚ್ಚಾಗಿರುವ ಕಾರಣ, ಭಾರತ ಸರ್ಕಾರವು ಅಲ್ಲಿರುವ ತನ್ನ ಪ್ರಜೆಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.