ನವದೆಹಲಿ: ಲೋಕಸಭೆ (Lok sabha) ಮತ್ತು ರಾಜ್ಯ ವಿಧಾನಸಭೆಗಳಲ್ಲಿ(Rajya sabha) ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Central government) ಮಹತ್ವದ ಹೆಜ್ಜೆ ಇರಿಸಿದೆ. ಈ ಕುರಿತ ಮಸೂದೆಯನ್ನು ಅಂಗೀಕರಿಸಲು ಏಪ್ರಿಲ್ (April) ಎರಡನೇ ಅಥವಾ ಮೂರನೇ ವಾರದಲ್ಲಿ ಸಂಸತ್ ಅಧಿವೇಶನ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವಿಪಕ್ಷಗಳ ಪ್ರಶ್ನೆ ಮತ್ತು ಸರ್ಕಾರದ ಉತ್ತರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರು ಈ ಬಗ್ಗೆ ವಿಷಯ ಪ್ರಸ್ತಾಪಿಸಿ, "ಬಜೆಟ್ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗುತ್ತದೆಯೇ ಅಥವಾ ಅಲ್ಪ ವಿರಾಮದ ನಂತರ ಮತ್ತೆ ಸಭೆ ಸೇರುವ ಬಗ್ಗೆ ಅಧಿಸೂಚನೆ ಹೊರಡಿಸಲಾಗುತ್ತದೆಯೇ?" ಎಂದು ಸ್ಪಷ್ಟನೆ ಕೋರಿದರು. ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮುಂದಿನ 2-3 ವಾರಗಳಲ್ಲಿ ಅತ್ಯಂತ ಪ್ರಮುಖವಾದ ಮಹಿಳಾ ಮೀಸಲಾತಿ ಅನುಷ್ಠಾನದ ಮಸೂದೆಯನ್ನು ಮಂಡಿಸಲಾಗುವುದು ಮತ್ತು ಅದಕ್ಕಾಗಿ ಸಭೆ ಸೇರಲಾಗುವುದು ಎಂದು ತಿಳಿಸಿದರು. ರಾಜಕೀಯ ಸಂಘರ್ಷ ಚುನಾವಣೆಗೂ ಮುನ್ನ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಸರ್ಕಾರವು ತರಾತುರಿಯಲ್ಲಿ ಈ ಮಸೂದೆಯನ್ನು ಮಂಡಿಸುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. "ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ರಾಜಕೀಯ ಲಾಭ ಪಡೆಯುವ ಏಕಪಕ್ಷೀಯ ನಿರ್ಧಾರವಿದು" ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಿಜಿಜು, "ದೇಶದ ಮಹಿಳೆಯರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಈ ಮಸೂದೆ ಮಂಡನೆಗೂ ಮುಂಬರುವ ರಾಜ್ಯ ಚುನಾವಣೆಗಳಿಗೂ ಯಾವುದೇ ಸಂಬಂಧವಿಲ್ಲ" ಎಂದು ಸ್ಪಷ್ಟಪಡಿಸಿದರು. ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, "ನಾವು ಈ ಕ್ರಮವನ್ನು ಬೆಂಬಲಿಸುತ್ತೇವೆ, ಆದರೆ ಸರ್ಕಾರದ ಈ ಆತುರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಹಿಳೆಯರ ಬಗ್ಗೆ ಅಷ್ಟೊಂದು ಬದ್ಧತೆ ಇದ್ದಿದ್ದರೆ ಮಸೂದೆ ಅಂಗೀಕಾರವಾದ ನಂತರ ಮೂರು ವರ್ಷ ಏಕೆ ಕಾಯುತ್ತಿದ್ದೀರಿ? ಅಧಿವೇಶನದ ಆರಂಭದಲ್ಲೇ ಇದನ್ನು ತರಬೇಕಿತ್ತು" ಎಂದು ಕಿಡಿಕಾರಿದರು.

