ಹಾಸನ: ಪ್ರಕರಣವೊಂದನ್ನು ಇತ್ಯರ್ಥಪಡಿಸಿಕೊಡಲು ಸಾರ್ವಜನಿಕರಿಂದ ಭಾರಿ ಮೊತ್ತದ ಲಂಚಕ್ಕೆ (Bribe) ಬೇಡಿಕೆ (Corruption) ಇಟ್ಟಿದ್ದ ಸಬ್ ಇನ್ಸ್ಪೆಕ್ಟರ್ (PSI) ಒಬ್ಬರು ಲೋಕಾಯುಕ್ತ (Lokayukta) ಪೊಲೀಸರ ಕಾರ್ಯಾಚರಣೆ ವೇಳೆ ಹಣದ ಸಮೇತ ಸಿಕ್ಕಿಬಿದ್ದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಳೇಬೀಡು ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿ. ಒಂದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್ಐ ಠಾಣೆಯಲ್ಲಿ ದಾಖಲಾಗಿದ್ದ ಎನ್ಸಿಆರ್ (Non-Cognizable Report) ಪ್ರಕರಣವೊಂದನ್ನು ಸುಲಭವಾಗಿ ಬಗೆಹರಿಸಲು ಪಿಎಸ್ಐ ಮಂಜುನಾಥ್ ಅವರು ನವೀನ್ ಎಂಬುವರಿಂದ ಬರೋಬ್ಬರಿ 1 ಲಕ್ಷ ರೂಪಾಯಿ ಲಂಚ ನೀಡುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತರು ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು. ಅಧಿಕಾರಿಗಳ ಸಲಹೆಯಂತೆ ನವೀನ್ ಅವರು ಲಂಚದ ಒಟ್ಟು ಮೊತ್ತದ ಪೈಕಿ ಮುಂಗಡವಾಗಿ 20,000 ರೂಪಾಯಿ ಹಣವನ್ನು ಪಿಎಸ್ಐಗೆ ನೀಡಲು ಮುಂದಾಗಿದ್ದರು. ಗುರುವಾರ ಹಳೇಬೀಡು ತಾಲೂಕಿನ ಹೋಟೆಲೊಂದರಲ್ಲಿ ಪಿಎಸ್ಐ ಮಂಜುನಾಥ್ ಸಾರ್ವಜನಿಕವಾಗಿ ನವೀನ್ ಅವರಿಂದ ಈ ಮುಂಗಡ ಹಣವನ್ನು ಸ್ವೀಕರಿಸುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಶಿಲ್ಪಾ ಹಾಗೂ ಗವಿರಾಜು ನೇತೃತ್ವದ ವಿಶೇಷ ತಂಡವು ಹಠಾತ್ ದಾಳಿ ನಡೆಸಿ, ಲಂಚದ ಹಣದೊಂದಿಗೆ ಪಿಎಸ್ಐ ಮಂಜುನಾಥ್ನನ್ನು ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಪಿಎಸ್ಐ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ದಕ್ಷಿಣ ಕನ್ನಡದ 9 ತಾಲೂಕು ಕಚೇರಿಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ! ಮಂಗಳೂರು: ದಕ್ಷಿಣ ಕನ್ನಡ (Dakshina Kannada ) ಜಿಲ್ಲೆಯ ತಹಸೀಲ್ದಾರ್ ಕಚೇರಿಗಳಲ್ಲಿ ನಡೆಯುತ್ತಿರುವ ಕಾರ್ಯವೈಖರಿ ಹಾಗೂ ಅಕ್ರಮಗಳ ಕುರಿತು ಸಾಲು ಸಾಲು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಲೋಕಾಯುಕ್ತ (Lokayukta )ಅಧಿಕಾರಿಗಳ ತಂಡ ಗುರುವಾರ ಜಿಲ್ಲೆಯ 9 ತಾಲೂಕು ಕಚೇರಿಗಳ ಮೇಲೆ ಏಕಕಾಲಕ್ಕೆ ಹಠಾತ್ ದಾಳಿ ನಡೆಸಿ ಸುದೀರ್ಘ ಪರಿಶೀಲನೆ ನಡೆಸಿದೆ. ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ಸೇವೆ ತಲುಪದಿರುವುದು, ಖಾತಾ ಬದಲಾವಣೆ ಹಾಗೂ ಭೂ ದಾಖಲೆಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿದ್ದವು. ಈ ಎಲ್ಲಾ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಲೋಕಾಯುಕ್ತರು ಸ್ವಯಂಪ್ರೇರಿತವಾಗಿ (Suo Motu) ಪ್ರಕರಣ ದಾಖಲಿಸಿಕೊಂಡು ಕಟ್ಟುನಿಟ್ಟಿನ ತನಿಖೆಗೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ, ಮೂಡುಬಿದಿರೆ, ಉಳ್ಳಾಲ ಹಾಗೂ ಮುಲ್ಕಿ ತಾಲೂಕು ಕಚೇರಿಗಳಲ್ಲಿನ ಬಾಕಿ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಿತು. ಕಚೇರಿಗಳಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪ ಮತ್ತು ಸಿಬ್ಬಂದಿಗಳ ಗೈರುಹಾಜರಿಯ ಕುರಿತಾಗಿಯೂ ಮಾಹಿತಿ ಸಂಗ್ರಹಿಸಲಾಯಿತು. ಲೋಕಾಯುಕ್ತರ ಈ ದಿಢೀರ್ ಕಾರ್ಯಾಚರಣೆಯಿಂದಾಗಿ ತಾಲೂಕು ಕಚೇರಿಗಳ ಲಂಚಗುಳಿ ಸಿಬ್ಬಂದಿ ಹಾಗೂ ದಲಾಳಿಗಳಲ್ಲಿ ತೀವ್ರ ನಡುಕ ಉಂಟಾಗಿದೆ. ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಿ ಕ್ರಮ ಕೈಗೊಂಡ ಲೋಕಾಯುಕ್ತರ ಈ ನಡೆಯನ್ನು ಜಿಲ್ಲೆಯ ಜನತೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

