ರಾಯಚೂರು: ಮಂತ್ರಾಲಯದ (Mantralaya) ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ (Sri Raghavendra Swamy Matha) ಭಕ್ತರು ದಾಖಲೆ ಪ್ರಮಾಣದ ಕಾಣಿಕೆ ಸಮರ್ಪಿಸಿದ್ದಾರೆ. ಕಳೆದ ಕೇವಲ 22 ದಿನಗಳಲ್ಲಿ ರಾಯರ ಹುಂಡಿಗೆ ಬರೋಬ್ಬರಿ 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ನಗದು ಸಂಗ್ರಹವಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಮೇ ಮತ್ತು ಜೂನ್ ತಿಂಗಳ ಅವಧಿಯಲ್ಲಿ ಮಂತ್ರಾಲಯಕ್ಕೆ ಹರಿದುಬಂದ ಭಕ್ತ ಸಾಗರವು ಈ ಬೃಹತ್ ಮೊತ್ತದ ಕಾಣಿಕೆಯನ್ನು ಅರ್ಪಿಸಿದೆ. ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳಿಂದಲೂ ಪ್ರತಿದಿನ ಸಹಸ್ರಾರು ಭಕ್ತರು ರಾಯರ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಿದ್ದು, ದರ್ಶನದ ಬಳಿಕ ತಮ್ಮ ಶಕ್ತ್ಯಾನುಸಾರ ಕಾಣಿಕೆ ಸಲ್ಲಿಸುತ್ತಿದ್ದಾರೆ.
ನಗದು ಕಾಣಿಕೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದರೂ, ಈ ಬಾರಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ರೂಪದಲ್ಲಿ ಬಂದ ಕಾಣಿಕೆ ಮಾತ್ರ ಗಣನೀಯವಾಗಿ ಇಳಿಮುಖವಾಗಿದೆ. ಹುಂಡಿ ಎಣಿಕೆಯ ಸಂದರ್ಭದಲ್ಲಿ ಕೇವಲ 46 ಗ್ರಾಂ ಚಿನ್ನ ಹಾಗೂ 750 ಗ್ರಾಂ ಬೆಳ್ಳಿ ಆಭರಣಗಳು ಮಾತ್ರ ಪತ್ತೆಯಾಗಿವೆ. ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಗನಕ್ಕೇರಿರುವುದು ಹಾಗೂ ದಿನೇ ದಿನೇ ಬೆಲೆ ಏರಿಕೆ ಆಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಬೆಲೆ ಏರಿಕೆಯ ಬಿಸಿ ಭಕ್ತರ ಜೇಬಿಗೆ ತಟ್ಟಿರುವುದರಿಂದ ಅವರು ಆಭರಣಗಳ ರೂಪದಲ್ಲಿ ಕಾಣಿಕೆ ನೀಡುವುದನ್ನು ಕಡಿಮೆ ಮಾಡಿದ್ದಾರೆ ಎನ್ನಲಾಗಿದೆ.
ಕಳೆದ ಆರು ತಿಂಗಳ ಮಠದ ಅಂಕಿ-ಅಂಶಗಳನ್ನು ಗಮನಿಸಿದರೆ ಚಿನ್ನ, ಬೆಳ್ಳಿಯ ಕಾಣಿಕೆಯಲ್ಲಿ ನಿರಂತರ ಕುಸಿತ ಕಂಡುಬಂದಿದೆ. ಜನವರಿಯಲ್ಲಿ 28 ಗ್ರಾಂ ಚಿನ್ನ ಹಾಗೂ 1278 ಗ್ರಾಂ ಬೆಳ್ಳಿ ಸಂಗ್ರಹವಾಗಿದ್ದರೆ, ಫೆಬ್ರವರಿಯಲ್ಲಿ 28 ಗ್ರಾಂ ಚಿನ್ನ ಮತ್ತು 1000 ಗ್ರಾಂ ಬೆಳ್ಳಿ ಲಭಿಸಿತ್ತು. ಮಾರ್ಚ್ ತಿಂಗಳಿನಲ್ಲಿ ಚಿನ್ನದ ಪ್ರಮಾಣ 14 ಗ್ರಾಂಗೆ ಕುಸಿದರೂ ಬೆಳ್ಳಿ 2163 ಗ್ರಾಂಗೆ ಏರಿಕೆಯಾಗಿತ್ತು.
ಇನ್ನು ಏಪ್ರಿಲ್ನಲ್ಲಿ 47 ಗ್ರಾಂ ಚಿನ್ನ ಹಾಗೂ 592 ಗ್ರಾಂ ಬೆಳ್ಳಿ ಬಂದಿದ್ದರೆ, ಮೇ ತಿಂಗಳಲ್ಲಿ 15 ಗ್ರಾಂ ಚಿನ್ನ ಮತ್ತು 751 ಗ್ರಾಂ ಬೆಳ್ಳಿ ಮಾತ್ರ ಸಂಗ್ರಹವಾಗಿತ್ತು. ಒಟ್ಟಾರೆಯಾಗಿ ಆಭರಣಗಳ ಕಾಣಿಕೆ ಕಡಿಮೆಯಾಗುತ್ತಿದ್ದರೂ, ರಾಯರ ಮೇಲಿರುವ ಭಕ್ತಿಯಿಂದಾಗಿ ನಗದು ರೂಪದ ಕಾಣಿಕೆಯಲ್ಲಿ ಮಾತ್ರ ಯಾವುದೇ ಕುಸಿತ ಕಂಡಿಲ್ಲ, ಬದಲಿಗೆ ಪ್ರತಿ ಬಾರಿಯೂ ಸಂಗ್ರಹ ಹೆಚ್ಚಾಗುತ್ತಲೇ ಸಾಗಿದೆ ಎಂದು ಮಂತ್ರಾಲಯ ಮಠ ಪ್ರಕಟಿಸಿದೆ.

