ನವದೆಹಲಿ: ಅಮೆರಿಕ (America) ಮತ್ತು ಇರಾನ್ (Iran) ನಡುವಿನ ಸಂಘರ್ಷಕ್ಕೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿರುವ ಬೆನ್ನಲ್ಲೇ, ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ (Mojtaba Khamenei) ಅವರ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈ ಯುದ್ಧದಲ್ಲಿ ಇರಾನ್ ವಿಜಯಶಾಲಿಯಾಗಿ ಹೊರಹೊಮ್ಮಿದೆ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ನ ಎಲ್ಲಾ ಷರತ್ತುಗಳಿಗೆ ಒಪ್ಪಿಕೊಂಡು 'ಶರಣಾಗಿದ್ದಾರೆ' ಎಂದಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಡೆದ ಭೀಕರ ಯುದ್ಧದಲ್ಲಿ 2,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಯಾಗಿತ್ತು. ಈ ಯುದ್ಧವನ್ನು ಅಂತ್ಯಗೊಳಿಸಲು ಇರಾನ್ ನೀಡಿದ 10 ಅಂಶಗಳ ಪ್ರಸ್ತಾವನೆಗೆ ಅಮೆರಿಕ ಒಪ್ಪಿಗೆ ಸೂಚಿಸಿದೆ. ಪ್ರತಿಯಾಗಿ ಇರಾನ್, ಜಾಗತಿಕ ತೈಲ ವ್ಯಾಪಾರದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ತಾತ್ಕಾಲಿಕವಾಗಿ ಪುನಃ ತೆರೆಯಲು ಸಮ್ಮತಿಸಿದೆ. ಈ ಬೆಳವಣಿಗೆಯನ್ನು ಇರಾನ್ ತನ್ನ ರಾಜತಾಂತ್ರಿಕ ಗೆಲುವು ಎಂದು ಬಣ್ಣಿಸಿದೆ. ಸುಪ್ರೀಂ ಲೀಡರ್ ಸೂಪರ್ ಆಗಿದ್ದಾರೆ! ಇದೇ ವೇಳೆ, ಇರಾನ್ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ಆರೋಗ್ಯದ ಕುರಿತು ಹಬ್ಬಿದ್ದ ವದಂತಿಗಳಿಗೆ ಇಲಾಹಿ ತೆರೆ ಎಳೆದಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಗುಪ್ತಚರ ಸಂಸ್ಥೆಗಳು ಮೊಜ್ತಬಾ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ವರದಿ ಮಾಡಿದ್ದವು. ಆದರೆ ಈ ವರದಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಇಲಾಹಿ, "ನಮ್ಮ ಸುಪ್ರೀಂ ಲೀಡರ್ ಸಂಪೂರ್ಣ ಆರೋಗ್ಯವಾಗಿದ್ದಾರೆ ಮತ್ತು ಅವರ ನೇತೃತ್ವದ ಮಂಡಳಿಯೇ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಅವರ ಮೇಲ್ವಿಚಾರಣೆಯಲ್ಲೇ ಇಡೀ ಆಡಳಿತ ನಡೆಯುತ್ತಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕ-ಇಸ್ರೇಲ್ ದಾಳಿಯಲ್ಲಿ ತಂದೆಯ ನಿಧನದ ನಂತರ ಮೊಜ್ತಬಾ ಖಮೇನಿ ಅವರು ಸುಪ್ರೀಂ ಲೀಡರ್ ಆಗಿ ನೇಮಕಗೊಂಡಿದ್ದರು. ಅಂದಿನಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಾರಣ ಅವರ ಆರೋಗ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಈಗ ಭಾರತದಲ್ಲಿರುವ ಅವರ ಪ್ರತಿನಿಧಿಯ ಹೇಳಿಕೆಯು ಇರಾನ್ ಆಡಳಿತ ವ್ಯವಸ್ಥೆಯಲ್ಲಿ ಎಲ್ಲವೂ ಸುಗಮವಾಗಿದೆ ಎಂಬ ಸಂದೇಶವನ್ನು ರವಾನಿಸಲು ಪ್ರಯತ್ನಿಸಿದೆ. ಸದ್ಯಕ್ಕೆ ಏರ್ಪಟ್ಟಿರುವ ಈ ಕದನ ವಿರಾಮವು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ದಾರಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂಓದಿ: ಪಾಕಿಸ್ತಾನದ ಒಪ್ಪಂದಗಳೆಲ್ಲಾ ಫೇಲ್ - ಸರಣಿ ವೈಫಲ್ಯದ ಪಟ್ಟಿ ಇಲ್ಲಿದೆ!

