ಮೈಸೂರು : ಉದ್ಯಾನವನಗಳ (park ) ಶೇಕಡಾ 5ರಷ್ಟು ಜಾಗವನ್ನು ವಾಣಿಜ್ಯ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವ 'ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ' ಅಂಗೀಕಾರವಾಗಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು (Protest ) ಭುಗಿಲೆದ್ದಿವೆ.
ಈ ವಿಧೇಯಕವು ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಯತ್ನವೆಂದು ಪರಿಸರ ಪ್ರೇಮಿಗಳು ಮತ್ತು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಈ ಹೋರಾಟದ ಕಾವು ಏರಿದ್ದು, ನಗರದ ಪ್ರಸಿದ್ಧ ಚೆಲುವಂಬಾ ಪಾರ್ಕ್ನಲ್ಲಿ ಗ್ರಾಹಕ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ಪಾರ್ಕ್ಗಳ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ಹಸಿರನ್ನು ರಕ್ಷಿಸಲು ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು "ಭೂ ಮಾಫಿಯಾ ದೊರೆ" ಎಂದು ಜರೆದ ಅವರು, "ನೀವು ರಾಜ್ಯದ ಕಸ್ಟೋಡಿಯನ್ ಅಥವಾ ಪ್ರೊಪ್ರೈಟರ್?" ಎಂದು ಪ್ರಶ್ನಿಸಿ, ಬೆಂಗಳೂರಿನ ಕೆರೆಗಳನ್ನು ಕಬಳಿಸಿದ ಬಳಿಕ ಈಗ ಪಾರ್ಕ್ಗಳ ಮೇಲೆ ಕಣ್ಣು ಬಿದ್ದಿದೆ ಎಂದು ಆರೋಪಿಸಿದರು. ಇದೇ ವೇಳೆ ಮಾತನಾಡಿದ ಎಂಎಲ್ಸಿ ರಘು ಕೌಟಿಲ್ಯ, ರಾಜ್ಯ ಸರ್ಕಾರವು ಅಭಿವೃದ್ಧಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದೆ ಎಂದು ವಾಗ್ದಾಳಿ ನಡೆಸಿದರು. ಈಗಾಗಲೇ ಪಾದಚಾರಿಗಳಿಗೆ ಜಾಗವಿಲ್ಲದಂತಾಗಿದ್ದು, ಈಗ ಪಾರ್ಕ್ಗಳನ್ನು ವಾಣಿಜ್ಯೀಕರಣಗೊಳಿಸಿದರೆ ಹಸಿರು ನಗರಿ ಮೈಸೂರು ಬರಡಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ರಾಜ್ಯದಲ್ಲಿ ತರಾತುರಿಯಲ್ಲಿ ಮಂಡನೆಯಾಗಿರುವ ಈ ವಿಧೇಯಕಕ್ಕೆ ಯಾವುದೇ ಕಾರಣಕ್ಕೂ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ನಾಯಕರು ಮನವಿ ಮಾಡಿದ್ದಾರೆ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

