ಕಠ್ಮಂಡು: ನೇಪಾಳದ(Nepal) ಪ್ರಧಾನಿ ಬಾಲೆನ್ ಶಾ(Balen Shah) ಅವರು ಸಂಸತ್ತಿನಲ್ಲಿ ಭಾರತದೊಂದಿಗಿನ(India) ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನೀಡಿರುವ ಹೊಸ ಹೇಳಿಕೆಯು ಅವರ ಸ್ವದೇಶದಲ್ಲೇ ತೀವ್ರ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತ ಮಾತ್ರವಲ್ಲದೆ ನೇಪಾಳ ಕೂಡ ಹಲವು ಕಡೆಗಳಲ್ಲಿ ಭಾರತದ ಭೂಮಿಯನ್ನು ಅತಿಕ್ರಮಣ ಮಾಡಿದೆ ಎಂದು ಅವರು ನೀಡಿರುವ ಜಂಟಿ ಅತಿಕ್ರಮಣದ ಹೇಳಿಕೆಗೆ ನೇಪಾಳದ ವಿರೋಧ ಪಕ್ಷಗಳು ಮತ್ತು ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಬಾಲೆನ್ ಶಾ ಹೇಳಿದ್ದೇನು?ದ್ವಿಪಕ್ಷೀಯ ಅತಿಕ್ರಮಣದ ಒಪ್ಪಿಗೆ: ನೇಪಾಳದ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ 35 ವರ್ಷದ ಕಿರಿಯ ಪ್ರಧಾನಿ ಬಾಲೆನ್ ಶಾ, "ನಾನು ಪ್ರಧಾನಿಯಾದ ನಂತರ ಇತ್ತೀಚೆಗಷ್ಟೇ ಒಂದು ಸತ್ಯವನ್ನು ತಿಳಿದುಕೊಂಡೆ. ಭಾರತವು ನೇಪಾಳದ ಭೂಮಿಯನ್ನು ಅತಿಕ್ರಮಿಸಿರುವುದು ನಿಜ, ಆದರೆ ಅದೇ ರೀತಿ ನೇಪಾಳ ಕೂಡ ಹಲವು ಸ್ಥಳಗಳಲ್ಲಿ ಭಾರತದ ಭೂಮಿಯನ್ನು ಅತಿಕ್ರಮಿಸಿದೆ" ಎಂದು ಹೇಳಿದ್ದಾರೆ. ತಜ್ಞರ ಸಮಿತಿಗೆ ಒತ್ತು: ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಲಾಪಾನಿ ಗಡಿ ವಿವಾದಗಳು ಉಭಯ ದೇಶಗಳ ಬಾಂಧವ್ಯಕ್ಕೆ ಕಂಟಕವಾಗಿದ್ದು, ಇತಿಹಾಸಕಾರರು, ಸರ್ವೇಯರ್ಗಳು ಮತ್ತು ತಜ್ಞರ ಸಹಾಯದೊಂದಿಗೆ ಸ್ನೇಹಪೂರ್ವಕವಾಗಿ ಇದನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಬ್ರಿಟನ್ ಮತ್ತು ಚೀನಾ ಮಧ್ಯಸ್ಥಿಕೆಗೆ ಯತ್ನ: ಈ ಗಡಿ ಸಮಸ್ಯೆಯು ಬ್ರಿಟಿಷ್ ಭಾರತದ ವಸಾಹತುಶಾಹಿ ಇತಿಹಾಸಕ್ಕೆ ಸಂಬಂಧಿಸಿದ್ದರಿಂದ, ಈ ವಿಷಯವನ್ನು ತಾವೂ ಈಗಾಗಲೇ ಚೀನಾ ಮತ್ತು ಯುನೈಟೆಡ್ ಕಿಂಗ್ಡಮ್ (UK) ಜೊತೆ ಚರ್ಚಿಸಿರುವುದಾಗಿ ಅವರು ಸಂಸತ್ತಿಗೆ ತಿಳಿಸಿದ್ದಾರೆ.

