ಬೆಂಗಳೂರು: ಕರ್ನಾಟಕದ ಹವಾಮಾನ ಒಂದು ಕ್ಷಣ ಇದ್ದ ಹಾಗೆ ಇನ್ನೊಂದು ಕ್ಷಣ ಇರುವುದಿಲ್ಲ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೇಳುವುದೇ ಬೇಡ. ಈಗಾಗಲೇ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ ಕೆಲ ದಿನಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, ಮಳೆರಾಯನ (Rain Alert) ಆರ್ಭಟ ಹೆಚ್ಚಾಗುವ ಸಾಧ್ಯತೆ ಇದೆ.
ಈ ವರ್ಷದ ಮುಂಗಾರು ಮಾರುತಗಳು ಜೂನ್ 4 ರಿಂದಲೇ ರಾಜ್ಯದ ಕರಾವಳಿ ತೀರಕ್ಕೆ ಪ್ರವೇಶಿಸುವ ಸಾಧ್ಯತೆ ಇದ್ದು, ಜೂನ್ 8 ರಿಂದ ಅಧಿಕೃತವಾಗಿ ಮಳೆಯ ಆಟ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಜೊತೆಗೆ ಭಾರತೀಯ ಹವಾಮಾನ ಇಲಾಖೆಯು (IMD) ರಾಜ್ಯಾದ್ಯಂತ ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಣೆ ಮಾಡಿದೆ.
ಜೂನ್ 5 ರ ವರೆಗೆ 64.5 ಮಿಮೀ ನಿಂದ 115.5 ಮಿಮೀ ಮಳೆ
ಜೂನ್ 3 ರಿಂದ ಜೂನ್ 5 ರ ಅವಧಿಯಲ್ಲಿ ರಾಜ್ಯದ ವಿವಿಧೆಡೆ 64.5 ಮಿಮೀ ನಿಂದ 115.5 ಮಿಮೀ ವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದ್ದು, ಸಾರ್ವಜನಿಕರು ಅಗತ್ಯ ಜಾಗ್ರತೆ ವಹಿಸುವಂತೆ ಕೋರಲಾಗಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದಲೇ ಅಂದರೆ ಜೂನ್ 1 ರಿಂದ ಜೂನ್ 4 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಇಲ್ಲೂ ಕೂಡ ಯೆಲ್ಲೂ ಅಲರ್ಟ್ ಘೋಷಣೆ ಮಾಡಲಾಗಿದೆ. ವಿಶೇಷವಾಗಿ ಜೂನ್ 1 ರಂದು ಗಂಟೆಗೆ 50 ರಿಂದ 60 ಕಿಲೋಮೀಟರ್ ವೇಗದಲ್ಲಿ ಭೀಕರ ಬಿರುಗಾಳಿ ಬೀಸಲಿದ್ದು, ಜೂನ್ 5 ರವರೆಗೆ 40-50 ಕಿಮೀ ವೇಗದ ಗಾಳಿ ಮುಂದುವರಿಯುವುದರಿಂದ ಧೂಳಿನಿಂದ ರಕ್ಷಣೆ ಪಡೆಯಲು ಸಿದ್ಧರಾಗಿರಬೇಕಿದೆ. ಇನ್ನು ದಕ್ಷಿಣ ಒಳನಾಡಿನಲ್ಲಿ ಜೂನ್ 1 ಮತ್ತು ಜೂನ್ 5 ರಂದು ಭಾರಿ ಸಿಡಿಲು ಆರಂಭ ಆಗಲಿದ್ದು, ಜೂನ್ 2 ರಿಂದ 4 ರವರೆಗೆ ಬಿರುಗಾಳಿ ಸಹಿತ ಮಳೆಯಾಗಲಿದೆ. ಕರಾವಳಿ ತೀರಕ್ಕೆ ಜೂನ್ 1 ಮತ್ತು 2 ರಂದು ಬಿರುಸಿನ ಗಾಳಿ ಬೀಸಲಿದ್ದು, ಜೂನ್ 3 ರಿಂದ 5 ರವರೆಗೆ ಮಿಂಚು-ಗುಡುಗಿನ ಆರ್ಭಟದೊಂದಿಗೆ ಮಳೆ ಸುರಿಯಲಿದೆ.
ಇಂದು ರಾತ್ರಿ ಭಾರೀ ಮಳೆ ಸಾಧ್ಯತೆ
ಇಂದು ರಾತ್ರಿಯ ವೇಳೆಗೆ ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದ್ದರೆ, ಉತ್ತರ ಕನ್ನಡದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗಬಹುದು. ಇದರೊಂದಿಗೆ ಮಲೆನಾಡು ಭಾಗದ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹಾಗೂ ಉತ್ತರ ಕರ್ನಾಟಕದ ಬೆಳಗಾವಿ ಉತ್ತರ, ಕೊಪ್ಪಳ, ರಾಯಚೂರು ಮತ್ತು ಹಾವೇರಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಅಥವಾ ರಾತ್ರಿಯ ವೇಳೆ ಗುಡುಗು ಸಹಿತ ಭಾರಿ ಮಳೆ ಆರ್ಭಟ ಇರಲಿದೆ
ಸಿಲಿಕಾನ್ ಸಿಟಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲೂ ಸಂಜೆ ಮತ್ತು ರಾತ್ರಿಯ ಹೊತ್ತು ಮಳೆರಾಯ ತನ್ನ ಆಟ ತೋರಿಸಲಿದ್ದು, ರಾತ್ರಿ ಅನಿವಾರ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಿ, ಹೋಗುವಾಗ ತಪ್ಪದೇ ಛತ್ರಿ ತೆಗೆದುಕೊಂಡಿ ಹೋಗಿ.

