ಪುಣೆ: ಮುಂಗಾರು ಮಳೆಯ (Rain Havoc) ಆರ್ಭಟಕ್ಕೆ ಪುಣೆಯ ಪಿಂಪ್ರಿ-ಚಿಂಚವಡ್ನ (Pimpri-Chinchwad) ಮೋಶಿ ಪ್ರದೇಶದಲ್ಲಿನ ಕಚೇರಿಯೊಂದರ ಕಟ್ಟಡ ಕುಸಿದು ಬಿದ್ದಿದೆ (building collapsed). ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಸುಮಾರು 15ಕ್ಕೂ ಹೆಚ್ಚು ಜನರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದ್ದು, ಭಾರಿ ದುರಂತವೊಂದು ತಪ್ಪಿದೆ.
ಊಟದ ಬಿಡುವಿನ ವೇಳೆ ನಡೆದ ದುರಂತ!
ವಾರದಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಟ್ಟಡದ ಪಕ್ಕದಲ್ಲಿದ್ದ ಕಸ ಹಾಗೂ ಅವಶೇಷಗಳ ದೊಡ್ಡ ರಾಶಿಯೊಂದು ತೇಲಿ ಬಂದು ಕಟ್ಟಡದ ಮೇಲೆ ಬಿದ್ದಿದೆ. ಇದರ ಒತ್ತಡಕ್ಕೆ ಸಿಲುಕಿ ಕಾಂಕ್ರೀಟ್ ಸ್ಲ್ಯಾಬ್ ಉರುಳಿ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ.
ಪಿಂಪ್ರಿ-ಚಿಂಚವಡ್ ಮೇಯರ್ ರವಿ ನೀಡಿರುವ ಮಾಹಿತಿ ಪ್ರಕಾರ, ದುರಂತ ಸಂಭವಿಸಿದ ಸಮಯದಲ್ಲಿ ಕಚೇರಿಯ 16 ಸಿಬ್ಬಂದಿಗಳು ಒಟ್ಟಿಗೆ ಕುಳಿತು ಮಧ್ಯಾಹ್ನ ಊಟ ಮಾಡುತ್ತಿದ್ದರು. ಸ್ಲ್ಯಾಬ್ ಕುಸಿಯುತ್ತಿದ್ದಂತೆ ಇಬ್ಬರು ಹೇಗೋ ಪ್ರಾಣ ಉಳಿಸಿಕೊಂಡು ಹೊರಗೆ ಓಡಿ ಬಂದಿದ್ದಾರೆ. ಆದರೆ ಇನ್ನುಳಿದವರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಎಲ್ಲರನ್ನೂ ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ಹೊರತರಲಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಒಂದು ವಾರದಿಂದ ಪುಣೆ ಮತ್ತು ಪಿಂಪ್ರಿ-ಚಿಂಚವಡ್ ಭಾಗದಲ್ಲಿ ಮಳೆರಾಯ ಬಿಡುವು ನೀಡದೆ ಸುರಿಯುತ್ತಿದ್ದಾನೆ. ಜುಲೈ ಮೊದಲ ವಾರದಲ್ಲೇ ಇಡೀ ತಿಂಗಳ ಸರಾಸರಿಗಿಂತ ಹೆಚ್ಚಿನ ಮಳೆಯಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ಪ್ರವಾಹ ಪೀಡಿತ ಮತ್ತು ತಗ್ಗು ಪ್ರದೇಶಗಳಲ್ಲಿದ್ದ 6,000 ಕ್ಕೂ ಹೆಚ್ಚು ನಿವಾಸಿಗಳನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಈ ಭಾಗದಲ್ಲಿ 'ಆರೆಂಜ್ ಅಲರ್ಟ್' ಘೋಷಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಸರಣಿ ಕಟ್ಟಡ ಕುಸಿತದ ಆತಂಕ!
ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ಕಟ್ಟಡ ಕುಸಿಯುತ್ತಿರುವ ಸರಣಿ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಕೆಲವೇ ದಿನಗಳ ಹಿಂದಷ್ಟೇ ಮುಂಬೈನ ಮಾಂಖುರ್ಡ್ ಪ್ರದೇಶದಲ್ಲಿ 3 ಅಂತಸ್ತಿನ ವಸತಿ ಕಟ್ಟಡವೊಂದು ಮಳೆಗೆ ಕುಸಿದು ಬಿದ್ದು, ಐದು ಮಕ್ಕಳು ಸೇರಿದಂತೆ ಆರು ಮಂದಿ ದುರ್ಮರಣಕ್ಕೀಡಾಗಿದ್ದರು. ಸದ್ಯ ಮಳೆ ಮುಂದುವರಿದಿರುವುದರಿಂದ ರಾಜ್ಯಾದ್ಯಂತ ಆಡಳಿತ ಮಂಡಳಿಗಳು ಕಟ್ಟುನಿಟ್ಟಿನ ನಿಗಾ ವಹಿಸಿವೆ.

