ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಹೈಡ್ರಾಮಾ ಮುಂದುವರಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇಂದು ನಡೆದ ಮಹತ್ವದ ಸಚಿವರ ಉಪಹಾರ ಕೂಟದ (Breakfast Meeting) ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಹೌದು, ರಾಜ್ಯಪಾಲರು ಸದ್ಯ ಕರ್ನಾಟಕದಲ್ಲಿ ಇಲ್ಲದಿರುವುದನ್ನು ಉಲ್ಲೇಖಿಸಿ ಮಾತನಾಡಿರುವ ಸಿಎಂ, "ಗವರ್ನರ್ ಇಲ್ಲದಿದ್ದರೆ ಏನಂತೆ? ನಾನು ನೇರವಾಗಿ ಅವರ ಕಚೇರಿಗೆ ಹೋಗಿ ರಾಜೀನಾಮೆ ಪತ್ರ ಕೊಟ್ಟು ಬರುತ್ತೇನೆ" ಎಂದು ಸಭೆಯಲ್ಲಿ ಖಡಕ್ ಆಗಿ ಹೇಳಿದ್ದಾರೆ. ಇನ್ನು ಅಮಿತ್ ಶಾ ಅವರು ಬೇಕಂತಲೇ ಗವರ್ನರ್ಗೆ ಕರೆ ಮಾಡಿ 3 ದಿನಗಳ ಕಾಲ ಬರದಂತೆ ತಡೆದಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಅನಗತ್ಯ ಗೊಂದಲ ಮೂಡಿಸಲು ಕೇಂದ್ರ ನಾಯಕರು ಸಂಚು ರೂಪಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ನೇರವಾಗಿ ಕಿಡಿಕಾರಿದ್ದಾರೆ. ರಾಜೀನಾಮೆ ಪ್ರಕ್ರಿಯೆ ಸುಗಮವಾಗಿ ನಡೆಯದಂತೆ ತಡೆಯಲು ಇಂತಹ ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

