Dailyhunt Logo
  • Light mode
    Follow system
    Dark mode
    • Play Story
    • App Story
STAMPEDE: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಘಟನೆಗೆ ಒಂದು ವರ್ಷ - ದುರಂತಕ್ಕೆ ಹೊಣೆ ಯಾರು?

STAMPEDE: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಘಟನೆಗೆ ಒಂದು ವರ್ಷ - ದುರಂತಕ್ಕೆ ಹೊಣೆ ಯಾರು?

Navasamaja.com 1 week ago

ಬೆಂಗಳೂರು: ಕರುನಾಡಿನ 'ಕ್ರಿಕೆಟ್‌ ಕಾಶಿ' ಬೆಂಗಳೂರಿನ (Bengaluru) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಸಂಭವಿಸಿದ ಆ ಕರಾಳ ಕಾಲ್ತುಳಿತ (Stampede) ದುರಂತಕ್ಕೆ ಇಂದಿಗೆ ಭರ್ತಿ ಒಂದು ವರ್ಷ ತುಂಬಿದೆ.

ಹದಿನೇಳು ವರ್ಷಗಳ ಸುದೀರ್ಘ ಕಾಯುವಿಕೆಗೆ ಬ್ರೇಕ್ ಹಾಕಿ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ಐತಿಹಾಸಿಕ ಸಂಭ್ರಮದ ನಡುವೆಯೇ ಈ ದುರಂತ ಸಂಭವಿಸಿತ್ತು.

ಇಂದು ಆರ್‌ಸಿಬಿ ತಂಡ ಸತತ ಎರಡನೇ ಬಾರಿಗೆ ಐಪಿಎಲ್‌ ಕಪ್‌ ಗೆದ್ದು ಬೀಗುತ್ತಿರುವ ಹೊತ್ತಿನಲ್ಲೇ, ಕಳೆದ ವರ್ಷ 11 ಅಭಿಮಾನಿಗಳನ್ನು ಬಲಿಪಡೆದ ಆ 'ಕಪ್‌ ತುಳಿತ'ದ ಘೋರ ನೆನಪು ಪ್ರತಿಯೊಬ್ಬ ಆರ್‌ಸಿಬಿ ಅಭಿಮಾನಿಯ ಸ್ಮೃತಿಪಟಲದಲ್ಲಿ ಇನ್ನೂ ಹಸಿಯಾಗಿಯೇ ಉಳಿದಿದೆ.

ವಿಷಾದದ ಸಂಗತಿಯೆಂದರೆ, ಘಟನೆ ನಡೆದು ವರ್ಷ ಕಳೆದರೂ ಈ ದುರ್ಘಟನೆಯ ಅಸಲಿ ಹೊಣೆಗಾರರು ಯಾರು ಎಂಬುದು ಇಂದಿಗೂ ಪತ್ತೆಯಾಗಿಲ್ಲ. ಸದ್ಯ ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ಸಿಐಡಿ (CID) ಅಧಿಕಾರಿಗಳು, ನ್ಯಾಯಾಲಯಕ್ಕೆ ಮೊದಲ ಹಂತದ ಆರೋಪ ಪಟ್ಟಿಯನ್ನು (Charge Sheet) ಸಲ್ಲಿಸಿದ್ದಾರೆ.

ಕಣ್ಣೀರಲ್ಲಿ ಕೊನೆಗೊಂಡ ಆರ್‌ಸಿಬಿಯ ಮೊದಲ ಗೆಲುವಿನ ಹಬ್ಬ

2025ರ ಜನವರಿ 3 ರಂದು ನಡೆದ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಅಂದಿನ ಹಬ್ಬದ ವಾತಾವರಣದ ನಡುವೆ, ಮರುದಿನವೇ ವಿಜೇತ ತಂಡದ ವಿಜಯೋತ್ಸವ ಆಚರಣೆಗೆ ಸಿದ್ಧತೆಗಳು ನಡೆದಿದ್ದವು. ಇಡೀ ರಾತ್ರಿ ಗೆಲುವಿನ ಉನ್ಮಾದದಲ್ಲಿದ್ದ ಲಕ್ಷಾಂತರ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ನಗರದಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವ ಮೆರವಣಿಗೆಗೆ 'ಕೆಂಪು ಬಾವುಟ' ಪ್ರದರ್ಶಿಸಿ ನಿರಾಕರಿಸಿದ್ದರು. ಆದರೆ ಪೊಲೀಸರ ಎಚ್ಚರಿಕೆಯನ್ನು ಲೆಕ್ಕಿಸದ ರಾಜ್ಯ ಸರ್ಕಾರ, ಆರ್‌ಸಿಬಿ ತಂಡವನ್ನು ಅಧಿಕೃತವಾಗಿ ಅಭಿನಂದಿಸಲು ಒಪ್ಪಿಗೆ ನೀಡಿತು.

ಪೊಲೀಸರು ಹಾಗೂ ಸರ್ಕಾರದ ನಡುವಿನ ತೀವ್ರ ಹಗ್ಗಜಗ್ಗಾಟದ ನಂತರ ಕೊನೆಗೆ ಸರ್ಕಾರವೇ ಮೇಲುಗೈ ಸಾಧಿಸಿತು. ಇದರ ಪರಿಣಾಮವಾಗಿ ವಿಧಾನಸೌಧದ ಮುಂದೆ ಸರ್ಕಾರದ ಪರವಾಗಿ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮತ್ತು ಆರ್‌ಸಿಬಿ ಆಡಳಿತ ಮಂಡಳಿ ಜಂಟಿಯಾಗಿ ಅಭಿನಂದನಾ ಸಮಾರಂಭವನ್ನು ಆಯೋಜಿಸಿದವು. ಮೆರವಣಿಗೆಗೆ ಪೊಲೀಸರು ನಿರ್ಬಂಧ ವಿಧಿಸಿದ್ದರೂ, ಆರ್‌ಸಿಬಿ ಆಡಳಿತ ಮಂಡಳಿಯು 'ವಿಕ್ಟರಿ ಪರೇಡ್' ನಡೆಯಲಿದೆ ಎಂಬ ಸಂದೇಶವನ್ನು ಹಂಚಿಕೊಂಡ ಆರೋಪ ಕೇಳಿಬಂತು. ಇದರಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಸಂಖ್ಯಾತ ಅಭಿಮಾನಿಗಳು ಜಮಾಯಿಸಿದರು.

ಕ್ರೀಡಾಂಗಣದ ಒಳಗೆ ನುಗ್ಗಲು ಅಭಿಮಾನಿಗಳು ಮುಗಿಬಿದ್ದಾಗ ಭೀಕರ ಕಾಲ್ತುಳಿತ ಸಂಭವಿಸಿ, 11 ಜನ ಆರ್‌ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡರೆ, 33ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡರು. ಈ ಸಂಬಂಧ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಾಗಿ, ಕಾರ್ಯಕ್ರಮ ಆಯೋಜಿಸಿದ್ದ ಕಂಪನಿಯ ಐವರನ್ನು ಬಂಧಿಸಲಾಯಿತಾದರೂ, ನಂತರ ಅವರು ಜಾಮೀನಿನ ಮೇಲೆ ಹೊರಬಂದರು. ಬಳಿಕ ಸರ್ಕಾರ ಈ ಕೇಸನ್ನು ಸಿಐಡಿಗೆ ವಹಿಸಿತು.

ಇಲಾಖೆಯನ್ನೇ ನಡುಗಿಸಿದ್ದ ಕಮಿಷನರ್ ಸೇರಿ ಐವರು ಪೊಲೀಸರ ತಲೆದಂಡ!

ಈ ಭೀಕರ ಕಾಲ್ತುಳಿತ ದುರಂತ ಇಡೀ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಭದ್ರತಾ ಲೋಪದ ಹಿನ್ನೆಲೆಯಲ್ಲಿ ಅಂದಿನ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ್, ಹೆಚ್ಚುವರಿ ಆಯುಕ್ತ (ಪಶ್ಚಿಮ) ವಿಕಾಸ್ ಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ. ಶೇಖರ್, ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಬಾಲಕೃಷ್ಣ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ಗಿರೀಶ್ ಅವರನ್ನು ಸರ್ಕಾರ ತಕ್ಷಣವೇ ಅಮಾನತುಗೊಳಿಸಿತು.

ರಾಜ್ಯ ಪೊಲೀಸ್ ಇತಿಹಾಸದಲ್ಲೇ ಬೆಂಗಳೂರು ಕಮಿಷನರ್ ದರ್ಜೆಯ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದು ಇದೇ ಮೊದಲಿಗಿತ್ತು. ಸುಮಾರು ಎಂಟು ತಿಂಗಳ ಸುದೀರ್ಘ ಅವಧಿಯ ಬಳಿಕ ಈ ಅಧಿಕಾರಿಗಳ ಅಮಾನತು ಆದೇಶವನ್ನು ಹಿಂಪಡೆಯಲಾಯಿತು.

ಮೃತ ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲಿ ಸಿಕ್ಕ ಗೌರವ ಮತ್ತು ನ್ಯಾಯಾಂಗ ತನಿಖೆ

ದುರಂತದ ನಂತರ ಎಚ್ಚೆತ್ತುಕೊಂಡ ಸರ್ಕಾರ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ನೇತೃತ್ವದಲ್ಲಿ ಏಕಸದಸ್ಯ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಿತು. ಈ ಸಮಿತಿ ನೀಡಿದ ಕಠಿಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿ ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿ ನಡೆಸಲು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸರ್ಕಾರ ಒಪ್ಪಿಗೆ ನೀಡಿತು. ಹೀಗಾಗಿ ಈ ಬಾರಿ ಪೊಲೀಸರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯಂತ ಕಟ್ಟುನಿಟ್ಟಿನ ಬಿಗಿ ಭದ್ರತೆ ಕಲ್ಪಿಸಿದ್ದರು.

ಇದರ ಜೊತೆಗೆ, ಐಪಿಎಲ್ ಆರಂಭಕ್ಕೂ ಮುನ್ನವೇ ಕಳೆದ ವರ್ಷ ಕಾಲ್ತುಳಿತದಲ್ಲಿ ಮೃತಪಟ್ಟ ಆ 11 ಅಮಾಯಕ ಅಭಿಮಾನಿಗಳ ಸವಿನೆನಪಿಗೆ ಕ್ರೀಡಾಂಗಣದ ಆವರಣದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯು ಒಂದು ಸುಂದರವಾದ ಸ್ಮಾರಕವನ್ನು ನಿರ್ಮಿಸಿದೆ.

ಅಷ್ಟೇ ಅಲ್ಲದೆ, ಪ್ರಸ್ತುತ ಸಾಲಿನ ಎಲ್ಲಾ ಐಪಿಎಲ್ ಪಂದ್ಯಗಳಲ್ಲೂ ಆ 11 ಆತ್ಮಗಳ ಗೌರವಾರ್ಥವಾಗಿ ಕ್ರೀಡಾಂಗಣದಲ್ಲಿ 11 ಆಸನಗಳನ್ನು (Seats) ಯಾರಿಗೂ ನೀಡದೆ ಕಾಯ್ದಿರಿಸುವ ಮೂಲಕ ಕೆಎಸ್‍ಸಿಎ ತನ್ನ ಭಾವುಕ ಗೌರವವನ್ನು ಸಲ್ಲಿಸಿದೆ. ಆರ್‌ಸಿಬಿಯ ಈ ಬಾರಿಯ ಗೆಲುವಿನ ಸಂಭ್ರಮದ ನಡುವೆಯೂ, ಕಳೆದ ವರ್ಷ ಮಡಿದ ಆ ಜೀವಗಳ ನೆನಪು ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja