ಬೆಂಗಳೂರು: ಲೋಕಸಭಾ ಚುನಾವಣೆಯ ಮೈತ್ರಿ ಲೆಕ್ಕಾಚಾರಕ್ಕಾಗಿ ತಮ್ಮ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗಾಗಿ ತ್ಯಾಗ ಮಾಡಿದ್ದ ಮಂಡ್ಯದ ಮಾಜಿ ಸಂಸದೆ, ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ಇದೀಗ ಭರ್ಜರಿ ರಾಜಕೀಯ ಬಂಪರ್ ಹೊಡೆಯೋ ಸಾಧ್ಯತೆ ದಟ್ಟವಾಗಿದೆ.
ಮುಂಬರುವ ರಾಜ್ಯಸಭೆ ಚುನಾವಣೆಗೆ ಸುಮಲತಾ ಅಂಬರೀಶ್ ಅವರನ್ನು ಎನ್ಡಿಎ (NDA) ಮೈತ್ರಿಕೂಟದ ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಗಂಭೀರ ಒಲವು ತೋರಿದೆ ಎನ್ನಲಾಗುತ್ತಿದೆ.
ರಾಜ್ಯಸಭೆಗೆ ಜೂನ್ 18 ರಂದು ಮಹತ್ವದ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆಗಾಗಿ ನವದೆಹಲಿಯಲ್ಲಿ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯ ಹಿರಿಯ ನಾಯಕರ ಪ್ರಮುಖ ಸಭೆ ನಡೆದಿದೆ. ಇನ್ನು ಎರಡು-ಮೂರು ದಿನಗಳಲ್ಲಿ ಹೈಕಮಾಂಡ್ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಇಂದೇ ಪ್ರಮುಖ ಅಭ್ಯರ್ಥಿಗಳ ಹೆಸರು ಘೋಷಣೆಯಾದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.
ತ್ಯಾಗಕ್ಕೆ ಸಿಗುತ್ತಾ ಪ್ರತಿಫಲ?
ಕಳೆದ ಲೋಕಸಭಾ ಚುನಾವಣೆಯ ವೇಳೆ ಮಂಡ್ಯ ಕ್ಷೇತ್ರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪರ್ಧಿಸಲು ಅನುಕೂಲವಾಗುವಂತೆ ಸುಮಲತಾ ಅಂಬರೀಶ್ ಅವರು ಭಾರಿ ರಾಜಕೀಯ ಒತ್ತಡಗಳ ನಡುವೆಯೂ ಕ್ಷೇತ್ರವನ್ನು ಬಿಟ್ಟುಕೊಟ್ಟು, ಬಿಜೆಪಿಯನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದರು. ಅಂದು ಅವರು ಮಾಡಿದ ಈ ದೊಡ್ಡ ತ್ಯಾಗವನ್ನು ಗಣನೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ, ಸುಮಲತಾ ಅವರಿಗೆ ದೆಹಲಿ ರಾಜಕಾರಣದಲ್ಲೇ ಮುಂದುವರಿಯಲು ರಾಜ್ಯಸಭೆಯ ಟಿಕೆಟ್ ನೀಡಲು ಮುಂದಾಗಿದೆ. ಇತ್ತೀಚಿನ ಸಭೆಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸುವ ಚರ್ಚೆಯ ನಡುವೆಯೇ, ಸುಮಲತಾ ಅವರ ಹೆಸರನ್ನು ವರಿಷ್ಠರು ಪ್ರಮುಖವಾಗಿ ಪ್ರಸ್ತಾಪಿಸಿ, ರಾಜ್ಯ ನಾಯಕರಿಂದ ಅವರ ಸದ್ಯದ ರಾಜಕೀಯ ಪ್ರಭಾವದ ಕುರಿತು ವಿವರಣೆ ಕೇಳಿದ್ದಾರೆ ಎಂದು ವರದಿಯಾಗಿದೆ.
ಸದಾನಂದಗೌಡ ಸೇರಿದಂತೆ ಭಾರಿ ಪೈಪೋಟಿ
ರಾಜ್ಯಸಭೆಯ ಈ ಒಂದು ಸೀಟಿಗಾಗಿ ಬಿಜೆಪಿಯಲ್ಲಿ ಭಾರಿ ಪೈಪೋಟಿ ಸೃಷ್ಟಿಯಾಗಿದೆ. ರಾಜ್ಯ ಬಿಜೆಪಿ ಘಟಕವು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಹೆಸರನ್ನು ಹೈಕಮಾಂಡ್ಗೆ ಪ್ರಮುಖವಾಗಿ ಶಿಫಾರಸು ಮಾಡಿದೆ. ಆದರೆ, ಸುಮಲತಾ ಅವರು ನೇರವಾಗಿ ಕೇಂದ್ರ ನಾಯಕರ ಮಟ್ಟದಲ್ಲೇ ಭಾರಿ ಪ್ರಯತ್ನ ನಡೆಸುತ್ತಿರುವುದರಿಂದ ಈ ಬಾರಿ ಅಂಬಿ ಪತ್ನಿಗೇ ಅದೃಷ್ಟ ಒಲಿಯುವ ಸಾಧ್ಯತೆ ಶೇ. 90 ರಷ್ಟಿದೆ ಎನ್ನಲಾಗುತ್ತಿದೆ.
ವಿಧಾನಪರಿಷತ್ ಅಭ್ಯರ್ಥಿಗಳ ಪಟ್ಟಿಯೂ ಇಂದೇ ಔಟ್?
ಇನ್ನೊಂದೆಡೆ ಕರ್ನಾಟಕ ವಿಧಾನಪರಿಷತ್ (Legislative Council) ಚುನಾವಣೆಗೂ ಮುಹೂರ್ತ ನಿಗದಿಯಾಗಿದ್ದು, ಬಿಜೆಪಿಯಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯೂ ಇಂದೇ ಪ್ರಕಟವಾಗುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯ ಬಿಜೆಪಿ ಘಟಕವು ಕೇಂದ್ರ ಚುನಾವಣಾ ಸಮಿತಿಗೆ 5 ಪ್ರಮುಖ ನಾಯಕರ ಹೆಸರನ್ನು ಶಿಫಾರಸು ಮಾಡಿ ಕಳುಹಿಸಿದೆ. ಅದರಲ್ಲಿ ನಳೀನ್ ಕುಮಾರ್ ಕಟೀಲ್ , ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್, ಎನ್. ಮಹೇಶ್ , ಮತ್ತು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಹೆಸರುಗಳು ಇವೆ..
ರಾಜ್ಯಸಭೆಗೆ ಸುಮಲತಾ ಅಂಬರೀಶ್ ಹಾಗೂ ವಿಧಾನಪರಿಷತ್ಗೆ ಹಳೇ ಮೈಸೂರು ಭಾಗದ ನಾಯಕರಿಗೆ ಮಣೆ ಹಾಕುವ ಮೂಲಕ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ಬಿಜೆಪಿ ಹೈಕಮಾಂಡ್ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದೆ. ದೆಹಲಿಯಿಂದ ಹೊರಬೀಳಲಿರುವ ಅಧಿಕೃತ ಪಟ್ಟಿಯತ್ತ ಈಗ ಇಡೀ ರಾಜ್ಯ ರಾಜಕಾರಣದ ಕಣ್ಣು ನೆಟ್ಟಿದೆ.

