ತಮಿಳುನಾಡು : ಇಲ್ಲಿನ (Tamilnadu) ಡಿಎಂಕೆ ಪಕ್ಷ (DMK party) ನಮ್ಮ ಶಾಸಕರನ್ನು ಸೆಳೆಯಲು ಭಾರೀ ಹಣದ ಆಮಿಷ ಒಡ್ಡುತ್ತಿದೆ ಎಂದು ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷದ ಶಾಸಕ ಶರವಣನ್ (Sharavanan) ಆರೋಪಿಸಿದ್ದಾರೆ. ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗಲು ತಮಗೆ ಬರೋಬ್ಬರಿ 30 ರಿಂದ 100 ಕೋಟಿ ರೂಪಾಯಿ ನಗದು ಹಾಗೂ ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ನೀಡುವ ಆಫರ್ ನೀಡಲಾಗಿತ್ತು ಎಂದು ಶ್ರೀವೈಕುಂಠಂ ಕ್ಷೇತ್ರದ ಶಾಸಕ ಶರವಣನ್ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ.
ಈ ಆಮಿಷಕ್ಕೆ ತಾವು ಒಪ್ಪದಿದ್ದಾಗ ತಮಗೆ ಪ್ರಾಣ ಬೆದರಿಕೆ ಒಡ್ಡಲಾಗಿದೆ ಎಂದು ಅವರು ದೂರಿದ್ದಾರೆ. ಈ ಕುರಿತಾದ ಆಡಿಯೋ ಕ್ಲಿಪ್ಪಿಂಗ್ ಒಂದನ್ನು ಬಿಡುಗಡೆ ಮಾಡಿರುವ ಶಾಸಕ ಶರವಣನ್, ಡಿಎಂಕೆ ಮುಖಂಡರ ಬೆಂಬಲಿಗರು ತಮ್ಮನ್ನು ನಿರಂತರವಾಗಿ ಸಂಪರ್ಕಿಸಿ ಪಕ್ಷಾಂತರಕ್ಕೆ ಒತ್ತಡ ಹೇರಿದ್ದರು ಎಂದು ತಿಳಿಸಿದ್ದಾರೆ. ಮಾಜಿ ಸಚಿವ ಅನಿತಾ ರಾಧಾಕೃಷ್ಣನ್ ಅವರ ಆಪ್ತರು ಈ ಸಂಚಿನಲ್ಲಿದ್ದು, ತಾವು ಒಪ್ಪದಿದ್ದಾಗ ತಮ್ಮ ಕಚೇರಿಗೆ ಬಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಇತ್ತೀಚೆಗೆ ಲಾರಿಯೊಂದನ್ನು ತಮ್ಮ ವಾಹನಕ್ಕೆ ಡಿಕ್ಕಿ ಹೊಡೆಸುವ ಮೂಲಕ ಹತ್ಯೆ ಮಾಡಲು ಯತ್ನಿಸಲಾಗಿತ್ತು ಎಂಬ ಆಘಾತಕಾರಿ ವಿಷಯವನ್ನೂ ಹಂಚಿಕೊಂಡಿದ್ದಾರೆ. ಇದೇ ರೀತಿಯ ಆಮಿಷವನ್ನು ಪಕ್ಷದ ಮತ್ತೊಬ್ಬ ಶಾಸಕ ಎಲೈಯರಾಜ ಅವರಿಗೂ ಒಡ್ಡಲಾಗಿತ್ತು ಎಂಬುದು ಈಗ ಬಯಲಾಗಿದೆ. ಈ ಬಗ್ಗೆ ತಮಿಳುನಾಡು ಪೊಲೀಸರು ಈಗಾಗಲೇ ತಿರುನಾವುಕ್ಕರಸು ಸೇರಿದಂತೆ ಮೂವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಬಂಧಿತ ಆರೋಪಿಗಳು ಸುಮಾರು ಹತ್ತು ಟಿವಿಕೆ ಶಾಸಕರನ್ನು ಸೆಳೆಯಲು ತಂತ್ರ ರೂಪಿಸಿದ್ದರು ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಈ ಪ್ರಕರಣದ ಎಫ್ಐಆರ್ನಲ್ಲಿ ಮಾಜಿ ಸಚಿವ ಸೆಂಥಿಲ್ ಬಾಲಾಜಿ ಅವರ ಹೆಸರನ್ನೂ ಸೇರಿಸಲಾಗಿದ್ದು, ತನಿಖೆ ತೀವ್ರಗೊಂಡಿದೆ. ಆದರೆ ಡಿಎಂಕೆ ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ಇದೆಲ್ಲವೂ ರಾಜಕೀಯ ಪ್ರೇರಿತ ಆಧಾರರಹಿತ ಹೇಳಿಕೆಗಳು ಎಂದು ತಿರುಗೇಟು ನೀಡಿದೆ.

