ಬೆಂಗಳೂರು: ಕಳೆದ ವರ್ಷ ತುಂಗಭದ್ರಾ ಜಲಾಶಯದ (TB Dam) 19ನೇ ಕ್ರೆಸ್ಟ್ ಗೇಟ್ (Crust gate) ಮುರಿದು ಬಿದ್ದಾಗ ಸರ್ಕಾರ ಅತ್ಯಂತ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿ ಕೇವಲ ಆರೇ ದಿನಗಳಲ್ಲಿ ತಾತ್ಕಾಲಿಕ ಗೇಟ್ ಅಳವಡಿಸುವ ಮೂಲಕ ಭಾರಿ ಪ್ರಮಾಣದ ನೀರು ಪೋಲಾಗುವುದನ್ನು ತಡೆದಿತ್ತು ಎಂದು ನೆನಪಿಸಿಕೊಂಡಿರುವ ಸಿಎಂ ಡಿಕೆ ಶಿವಕುಮಾರ್ (DK Shivakumar), ಆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಭವಿಷ್ಯದಲ್ಲಿ ಇಂತಹ ಅಪಾಯಗಳು ಮರುಕಳಿಸದಂತೆ ತಡೆಯಲು ಅಣೆಕಟ್ಟಿನ ಎಲ್ಲಾ 33 ಗೇಟುಗಳನ್ನೂ ಸಂಪೂರ್ಣವಾಗಿ ಬದಲಾಯಿಸುವ ದೃಢ ನಿರ್ಧಾರ ಕೈಗೊಂಡಿತ್ತು ಎಂದಿದ್ದಾರೆ.
ಅದರಂತೆ ಪ್ರಸ್ತುತ ಎಲ್ಲಾ ಗೇಟ್ಗಳ ನವೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆಯ ಸಮರ್ಪಣಾ ಕಾರ್ಯಕ್ರಮ ಜೂನ್ 25 ರಂದು ನೆರವೇರಲಿದ್ದು, ನೆರೆರಾಜ್ಯಗಳ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು, ರೇವಂತ್ ರೆಡ್ಡಿ ಹಾಗೂ ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಅವರ ಸಮ್ಮುಖದಲ್ಲಿ ಹೊಸ ಗೇಟ್ಗಳನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುತ್ತಿದೆ.
ಸುಮಾರು ನಾಲ್ಕು ಜಿಲ್ಲೆಗಳ ಲಕ್ಷಾಂತರ ರೈತ ಕುಟುಂಬಗಳ ಕೃಷಿ ಭೂಮಿಗೆ ಜೀವನಾಡಿಯಾಗಿರುವ ಮತ್ತು ಕೋಟ್ಯಂತರ ಜನರಿಗೆ ಕುಡಿಯುವ ನೀರು ಒದಗಿಸುತ್ತಿರುವ ಈ ಜಲಾಶಯವನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಕಾಯ್ದಿರಿಸುವುದು ನಮ್ಮ ಜವಾಬ್ದಾರಿಯಾಗಿದೆ. ರಾಜ್ಯದ ಜನತೆಗೆ ಮತ್ತು ತುಂಗಭದ್ರಾ ಜಲಾನಯನ ಪ್ರದೇಶದ ಕೃಷಿಕರಿಗೆ ಈ ಯೋಜನೆಯನ್ನು ಸಮರ್ಪಿಸುತ್ತಿರುವುದಾಗಿ ಹೆಮ್ಮೆಯಿಂದ ಹಂಚಿಕೊಂಡಿರುವ ಅವರು, ಈ ಕಾರ್ಯಕ್ರಮ ಜನಸಾಮಾನ್ಯರದ್ದೇ ಆಗಿದ್ದು, ಎಲ್ಲರ ಸಹಕಾರ ಮತ್ತು ಆಶೀರ್ವಾದ ಸದಾ ಸರ್ಕಾರದ ಮೇಲಿರಲಿ ಎಂದು ಆಶಿಸಿದ್ದಾರೆ.

