ಬೆಂಗಳೂರು: ರಾಜ್ಯದ ಕೆಲವು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನನ್ನ ಧ್ವನಿಯ ಆಡಿಯೋ ಸಂಪೂರ್ಣವಾಗಿ ನಕಲಿಯಾಗಿದ್ದು, ಅದನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಸ್ಪಷ್ಟಪಡಿಸಿದ್ದಾರೆ.
ಪಿತೂರಿ ಮಾಡಲಾಗಿದೆ ಎಂದ ಜಮೀರ್
ತಮ್ಮ ಹೆಸರಿನಲ್ಲಿ ಹರಡುತ್ತಿರು ವದಂತಿಗಳ ಕುರಿತು ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇದು ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದ ವಿರೋಧಿಗಳು ನಡೆಸಿರುವ ವ್ಯವಸ್ಥಿತ ಪಿತೂರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಮೀರ್ ಅಹಮದ್, ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ನಕಲಿ ಆಡಿಯೋ ಸೃಷ್ಟಿಸಿ ವೈರಲ್ ಮಾಡಿರುವ ಕಿಡಿಗೇಡಿಗಳ ಪತ್ತೆಗೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಸಾರ್ವಜನಿಕರಲ್ಲಿ ಮತ್ತು ಪಕ್ಷದ ವಲಯದಲ್ಲಿ ಅನಗತ್ಯ ಗೊಂದಲ ಮೂಡಿಸುವ ಉದ್ದೇಶದಿಂದಲೇ ಇಂತಹ ಕೃತ್ಯ ಎಸಗಲಾಗಿದ್ದು, ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಆಡಿಯೋದಲ್ಲಿರುವ ಮಾತುಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಈ ವಿವಾದದ ಸತ್ಯಾಸತ್ಯತೆ ಹೊರಬರಲು ಸರ್ಕಾರ ಯಾವುದೇ ರೀತಿಯ ಉನ್ನತ ಮಟ್ಟದ ತನಿಖೆ ನಡೆಸಿದರೂ ನಾನು ಎದುರಿಸಲು ಸಿದ್ಧ ಎಂದು ಮುಕ್ತ ಸವಾಲು ಹಾಕಿದ್ದಾರೆ.
ಆಡಿಯೋದಲ್ಲಿ ಏನಿದೆ?
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದಕ್ಕೆ ಅಲ್ಪಸಂಖ್ಯಾತ ನಾಯಕರು ಅಸಮಾಧಾನಗೊಂಡಿದ್ದರು. ಈ ನಡುವೆ ಲೀಕ್ ಆಗಿರುವ ಆಡಿಯೋದಲ್ಲಿ, ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರನ್ನು ಸೋಲಿಸಲು ಮತ್ತು ಪಕ್ಷದ ಆಂತರಿಕ ಕಾರ್ಯತಂತ್ರಗಳನ್ನು ಹಳಿತಪ್ಪಿಸಲು ನಡೆದ ಚರ್ಚೆಗಳು ಅಡಗಿವೆ ಎನ್ನಲಾಗಿದೆ.
ಆಡಿಯೋದಲ್ಲಿ ಮಹಮ್ಮದ್ಸಿರಾಜ್ ಅವರೊಂದಿಗೆ ಮುಸ್ಲಿಂ ಮತದಾರರನ್ನು ನೀವಾಗಿಯೇ ಕರೆತರಬೇಡಿ ಎಂದಿದ್ದಾರೆ. ಬಂದರೂ ಅವರಿಗೆ ಕಾಂಗ್ರೆಸ್ಗೆ ವೋಟ್ ಹಾಕಿ ರೂಡಿ, ಅವರಿಗೆ ಪಕ್ಷೇತರರಿಗೆ ವೋಟ್ ಹಾಕಲು ಹೇಳಿ ಎಂದಿದ್ದಾರೆ.
ಈ ಸಂವೇದನಾಶೀಲ ಆಡಿಯೋ ರೆಕಾರ್ಡಿಂಗ್ಗಳು ಸದ್ಯ ಕಾಂಗ್ರೆಸ್ ಹೈಕಮಾಂಡ್ ಕೈಸೇರಿದ್ದು, ನವದೆಹಲಿ ಮಟ್ಟದಲ್ಲಿ ಗಂಭೀರ ಪರಿಶೀಲನೆ ಆರಂಭವಾಗಿದೆ.
ಈ ವಿವಾದದ ಕುರಿತು ಮಾಧ್ಯಮಗಳಿಗೆ ವಿಶೇಷ ಪ್ರತಿಕ್ರಿಯೆ ನೀಡಿರುವ ಸಚಿವ ಜಮೀರ್ ಅಹ್ಮದ್ ಖಾನ್, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ರಾಜಕೀಯ ಪ್ರೇರಿತ: ಈ ಆಡಿಯೋ ಲೀಕ್ ಹಗರಣವು ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ತಾವು ಯಾವಾಗಲೂ ಪಕ್ಷದ ಹಿತಾಸಕ್ತಿಗಾಗಿಯೇ ಕೆಲಸ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಶಿಸ್ತುಕ್ರಮ ಕೈಗೊಳ್ಳಲಿದೆಯೇ?ಇಬ್ಬರು ನಾಯಕರ ಅಮಾನತು: ಈ ಒಳಸಂಚಿನ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಈಗಾಗಲೇ ತನ್ನ ಇಬ್ಬರು ಹಿರಿಯ ಅಲ್ಪಸಂಖ್ಯಾತ ನಾಯಕರಾದ ಅಬ್ದುಲ್ ಜಬ್ಬಾರ್ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ವಿರುದ್ಧ ಕಠಿಣ ಕ್ರಮ ಕೈಗೊಂಡು ಪಕ್ಷದಿಂದ ಹೊರಹಾಕಿದೆ.

