Dailyhunt
ಬಿ.ಜೆ.ಪಿ.ರಾಜ್ಯಾಧ್ಯಕ್ಷರಿಂದ ಕನ್ಯಾಡಿ ಶ್ರೀಗಳ ಪಾದಪೂಜೆ

ಬಿ.ಜೆ.ಪಿ.ರಾಜ್ಯಾಧ್ಯಕ್ಷರಿಂದ ಕನ್ಯಾಡಿ ಶ್ರೀಗಳ ಪಾದಪೂಜೆ

ಬೆಳ್ತಂಗಡಿ: ದೇವರಗುಡ್ಡೆ ಗುರುದೇವ ಮಠದಲ್ಲಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಆಡಳಿತ ಸಮಿತಿ ಹಾಗೂ ಚಾತುರ್ಮಾಸ್ಯ ಸಮಿತಿ ವತಿಯಿಂದ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನಮ್ ಪೀಠಾಧೀಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾರಂಭವಾಗಿದ್ದು ಎರಡನೇ ದಿನ ಭಾನುವಾರದಂದು ಭಾಜಪ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶ್ರೀಗಳ ಚಾತುರ್ಮಾಸ್ಯದಲ್ಲಿ ಪಾಲ್ಗೊಂಡು ಪಾದಪೂಜೆ ನೆರವೇರಿಸಿದರು.

ಚಾತುರ್ಮಾಸ್ಯದಲ್ಲಿ ಕನ್ಯಾಡಿ ಶ್ರೀಗಳ ಪಾದಪೂಜೆ ನೆರವೇರಿಸಿ, ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಯಾವನಿಗೆ ಗುರುವಿನ ಆಶ್ರಯ ಇಲ್ಲವೋ ಅವೆಷ್ಟೇ ದೊಡ್ಡ ಸಾಧಕನಾದರೂ ಫಲಶ್ರುತಿ ಸಿಗುವುದಿಲ್ಲ. ರಾಜ ಪೀಠ ಶ್ರೇಷ್ಠವಲ್ಲ. ನಮಗೆ ಗುರುಪೀಠ ಶ್ರೇಷ್ಠ.

ಗುರುಗಳ ಮಾರ್ಗದರ್ಶನದಿಂದ ಶ್ರೇಷ್ಠತೆಯನ್ನು ಪಡೆಯಬಹುದು. ಮಠಗಳ ಸಂರಕ್ಷಣೆ ಮಾಡುವುದು ಸಮಾಜದ ಜವಾಬ್ದಾರಿಯಾಗಿದ್ದು, ಸಮಾಜಕ್ಕೆ ಮಾರ್ಗದರ್ಶನ ಮಾಡುವುದು ಮಠದ ಜವಾಬ್ದಾರಿಯಾಗಿದೆ. ಹಾಗಾಗಿ ಜಿಲ್ಲೆಯ ಎಲ್ಲ ಶಾಸಕರೊಡಗೂಡಿ ಶ್ರೀರಾಮಕ್ಷೇತ್ರದಲ್ಲಿ ನಿರ್ಮಾಣವಾಗಲಿರುವ ಅನ್ನಛತ್ರಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಪೂರ್ವಜನ್ಮದ ಪುಣ್ಯದ ಫಲದಿಂದ ಯೋಗ ಭಾಗ್ಯಗಳು ಕೂಡಿ ಬರುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಪುನರ್ಜನ್ಮದ ಕುರಿತು ನಂಬಿಕೆ ಇರುವ ಸಂಸ್ಕೃತಿ ನಮ್ಮದು. ಅಂಧಕಾರದಲ್ಲಿರುವ ನಮ್ಮ ಜೀವನಕ್ಕೆ ಆಧ್ಯಾತ್ಮದ ಮೂಲಕ ಬೆಳಕನ್ನು ತೋರಿಸಿ, ಭಗವಂತನ ಸಾನಿಧ್ಯವನ್ನು ಹಾಗೂ ಜ್ಞಾನದ ವಿಕಾಸದ ಮೂಲಕ ಜಗತ್ತನ್ನು ತೋರಿಸಿದವರು ಗುರು. ಭಾರತೀಯ ಸಂಸ್ಕೃತಿ ಆಧಾರದಲ್ಲೇ ರಾಷ್ಟ್ರೋನ್ನತಿ ಮಾಡುವ ಕಾರ್ಯ ಮಾಡಬೇಕೆಂಬುದೇ ಬಿಜೆಪಿಯ ನಿಲುವು. ಜಗದ್‌ವಂದ್ಯ ಭಾರತ ನಿರ್ಮಾಣಕ್ಕೆ ಸ್ವಾಮೀಜಿಗಳ ಆಶೀರ್ವಾದ ಇರಲಿ ಎಂದ ಅವರು ಗುರುಶ್ರೇಷ್ಠರ ಚಾತುರ್ಮಾಸ್ಯ ಕಾರ್ಯದ ಜವಾಬ್ದಾರಿ ಹೊತ್ತು ಶಾಸಕ ಹರೀಶ್ ಪೂಂಜ ಮಾಡಿದ ಕಾರ್ಯ ಅವರ ರಾಜಕೀಯ ಉನ್ನತಿಗೂ ಕಾರಣವಾಗಲಿದೆ ಎಂದರು.

ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನಮ್ ಪೀಠಾಧೀಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯ ಪರಂಪರೆಯಲ್ಲಿ ಬೇಕಾಗಿರುವುದು ಪರಮಶಾಂತಿ, ನೆಮ್ಮದಿ. ಧರ್ಮವನ್ನು ಯಾರು ಅನುಸರಿಸುತ್ತಾನೆ ಅವನಿಗೆ ಸುಖ ಸಿಗುತ್ತದೆ. ಧರ್ಮವನ್ನು ರಾಜಪರಂಪರೆ ಉಳಿಸಬೇಕು. ಯುಗ ಯುಗಾಂತರದಿಂದ ಬಂದ ಧರ್ಮವನ್ನು ನಿಷ್ಕಲ್ಮಶ ಭಾವದಿಂದ ರಕ್ಷಿಸಬೇಕು. ಉದ್ಯೋಗಕ್ಕಾಗಿ ಪ್ರಮಾಣ ಪತ್ರ ಪಡೆದ ಪದವಿಗಿಂತ ನೈತಿಕ ಮೌಲ್ಯಾಧಾರಿತ ಶಿಕ್ಷಣ ಜತೆಗೆ ಆಧ್ಯಾತ್ಮ ಚಿಂತನೆಯ ಉದ್ದೀಪನ ಆಗಬೇಕು ಎಂದ ಶ್ರೀಗಳು ನಮ್ಮ ಜನ್ಮ ಸಾರ್ಥಕ್ಯ ಆಗಬೇಕಾದರೆ ಗುರುಕುಲ ಪದ್ದತಿಯ ಆಧ್ಯಾತ್ಮ ಚಿಂತನೆಯ ಶಿಕ್ಷಣ ಎಲ್ಲರೂ ಪಡೆದಾಗ ಭಗವಂತನ ಸಾನಿಧ್ಯ ಸಿಗುತ್ತದೆ. ಸನಾತನ ಧರ್ಮವನ್ನು, ಗುರು ಪರಂಪರೆಯನ್ನು ರಾಜ ಪರಂಪರೆಯಿಂದ ಉಳಿಸುವ ಕಾರ್ಯ ಆಗಲಿ ಎಂದರು.

ಪಾದಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಕ್ ಹಾಗೂ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಅವರು, ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಬೆಳ್ತಂಗಡಿ ಶಾಸಕ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಹರೀಶ್ ಪೂಂಜ ಗಣ್ಯರನ್ನು ಸ್ವಾಗತಿಸಿ, ವಂದಿಸಿದರು.

ಬೆಂಗಳೂರಿನ ಆಗಮ ಪ್ರವೀಣ ಲಕ್ಷ್ಮೀಪತಿ ಗೋಪಾಲಚಾರ್ಯ ಹಾಗೂ ಅವರ ತಂಡದವರು ಪಾದಪೂಜೆ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭ ಶ್ರೀಗುರುದೇವ ಮಠದ ಟ್ರಸ್ಟಿ ತುಕರಾಮ ಸಾಲಿಯಾನ್, ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಸಮಿತಿಯ ಪದಾಕಾರಿಗಳಾದ ಪ್ರಶಾಂತ್ ಪಾರೆಂಕಿ, ರತ್ನಾಕರ್ ಬುಣ್ಣನ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಕೃಷ್ಣಪ್ಪ ಗುಡಿಗಾರ್, ದಯಾನಂದ ಬೆಳಾಲು, ಸಂತೋಷ್ ಕುಮಾರ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಉಪಾಧ್ಯಕ್ಷ ಸೀತಾರಾಮ ಬೆಳಾಲು, ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ, ಸದಸ್ಯ ರಾಘವ ಕಲ್ಮಂಜ, ಬಂಗಾಡಿ ಸಿಎ ಬ್ಯಾಂಕಿನ ಅಧ್ಯಕ್ಷ ಹರೀಶ್ ಸಾಲಿಯಾನ್, ಕಮರ್ಷಿಯಲ್ ಟಾಕ್ಸ್ ಅಧಿಕಾರಿ ರಾಜು ನಾಯ್ಕ್, ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಮೊದಲಾದವರು ಇದ್ದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: News Kannada