ಮಂಗಳೂರು : ದ.ಕ. ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆ ನಿಧಾನವಾಗಿ ನಡೆಯುತ್ತಿದೆ. ಫಾರಂ ಭರ್ತಿ ಮಾಡಲು ಬಿಎಲ್ ಒಗಳ ಜತೆ ತಜ್ಞರನ್ನು ಕಳುಹಿಸಬೇಕು. ಇಲ್ಲವಾದಲ್ಲಿ ಒಂದು ತಿಂಗಳಾದರೂ ಈ ಪ್ರಕ್ರಿಯೆ ಮುಗಿಯದು ಎಂದು ಐವನ್ ಡಿಸೋಜಾ ಹೇಳಿದರು.
ಮತದಾರರ ಪಟ್ಟಿಯಲ್ಲಿನ ಫೋಟೋ ಅಪ್ಗ್ರೇಡ್ ಮಾಡಲು ಅನುಕೂಲವಾಗುವಂತೆ ಬಿಎಲ್ಒಗಳಿಗೆ ಫೋಟೋ ಕ್ಯಾಪ್ಚರ್ ಆಯಪ್ ಒದಗಿಸಿರುವುದಾಗಿ ಚುನಾವಣಾ ಆಯೋಗ ತಿಳಿಸಿದ್ದರೂ ದ.ಕ ಜಿಲ್ಲೆಯಲ್ಲಿ ಅದಕ್ಕೆ ವ್ಯವಸ್ಥೆ ಆಗಿಲ್ಲ.
ಫಾರಂಗಳನ್ನು ಕನ್ನಡದ ಜತೆಗೆ ಆಂಗ್ಲ ಭಾಷೆಯಲ್ಲಿಯೂ ನೀಡಬೇಕು. ಪ್ರತಿಯೊಬ್ಬರಿಗೂ ಸರಿಯಾದ ಮಾಹಿತಿ ನೀಡಬೇಕು. ಎನ್ಯುಮರೇಷನ್ ಫಾರಂ ಪಡೆದುಕೊಂಡ ದಿನವೇ ವಾಪಸ್ ನೀಡುವಂತೆ ಒತ್ತಾಯಿಸಬಾರದು. ಎಲ್ಲ ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕು. ಮ್ಯಾಪಿಂಗ್ನಲ್ಲಿ ಬಿಟ್ಟು ಹೋಗಿರುವ ಜಿಲ್ಲೆಯ 1,92,284 ಮತದಾರರು ಕೂಡ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕು ಎಂದು ಐವನ್ ಡಿಸೋಜಾ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ, ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ನಗರಾಧ್ಯಕ್ಷೆ ಅಪ್ಪಿ, ಪ್ರಮುಖರಾದ ಪ್ರಕಾಶ್ ಸಾಲಿಯಾನ್, ಭಾಸ್ಕರ ರಾವ್, ಮೀನಾ ಟೆಲ್ಲಿಸ್, ನಾಗೇಂದ್ರ, ಇಮ್ರಾನ್ ಆರ್, ಮನುರಾಜ್, ಅಲೆಸ್ಟಿನ್, ನವೀನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

