ಮೈಸೂರು: ಇಲ್ಲಿಗೆ ಸಮೀಪದ ಕೇತುಪುರ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಕಳೆದ ಸೆ.12ರಂದು ರಾತ್ರಿ ಕೇತುಪುರ ಗ್ರಾಮದ ನಿವಾಸಿ ಸಿದ್ದರಾಜು ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ ಬನ್ನೂರು ಪೊಲೀಸರು, ಕೇತುಪುರ ಗ್ರಾಮದ ಕೆ.ಆರ್. ಸುಭಾಷ್(23), ಚಂದನ್(22),ಸಂಜಯ್(24), ಪುನೀತ್(22), ವಿನಯ್(30), ರವಿ(24) ಹಾಗೂ ಚಂದ್ರು(25) ಅವರುಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಿಸಿದ್ದ ಮಾರಕಾಸ್ತ್ರ, ಬೈಕ್ ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಲೆಯಾದ ಸಿದ್ದರಾಜುವಿನ ಹೆಂಡತಿ ಪೂಜಾಳೊಂದಿಗೆ ಆರೋಪಿ ಸಂಜಯ್ ಅಕ್ರಮ ಸಂಬಂಧ ಹೊಂದಿದ್ದ.
ಈ ವಿಷಯವಾಗಿ ಸಿದ್ದರಾಜು ಹಾಗೂ ಕುಟುಂಬದವರು ಸಂಜಯ್ ಹಾಗೂ ಆತನ ಸ್ನೇಹಿತರ ನಡುವೆ ಜಗಳ ನಡೆಯುತ್ತಿತ್ತು. ಈ ನಡುವೆ ಸೆ.10ರಂದು ಮನೆ ಮುಂದೆ ವೀಲಿಂಗ್ ಮಾಡುತ್ತಿದ್ದ ಸಂಜಯ್ನನ್ನು ಗಮನಿಸಿದ ಸಿದ್ದರಾಜು, ವೀಲಿಂಗ್ ಮಾಡದಂತೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಸಂಜಯ್ ತನ್ನ ಸ್ನೇಹಿತರೊಂದಿಗೆ ಸೇರಿ, ಸಿದ್ದರಾಜು ಅವರನ್ನು ಕೊಲೆ ಮಾಡಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

