ಉಡುಪಿ: ಗಣೇಶೋತ್ಸವ ಬಂದರೆ ಸಾಕು ಉಡುಪಿಯ ಅಲೆವೂರಿನ ನಿವೃತ್ತ ಶಿಕ್ಷಕ ಶೇಖರ ಕಲ್ಮಾಡಿ ಅವರ ಮನೆಯಂಗಳದಲ್ಲಿ ವಿವಿಧ ವಿನ್ಯಾಸದ ಗಣಪತಿ ಮೂರ್ತಿಗಳ ನಿರ್ಮಾಣದ ಚಟುವಟಿಕೆ ಗರಿಗೆದರಿದೆ. ಹಲವು ವರ್ಷಗಳಿಂದ ಆವೆ ಮಣ್ಣಿನಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ನಿರ್ಮಿಸುತ್ತಿರುವ ಅವರು, ಈ ಬಾರಿಯೂ ತಮ್ಮ ಕಲಾ ಕೌಶಲದಿಂದ ಗಮನ ಸೆಳೆಯುತ್ತಿದ್ದಾರೆ.
ಅಲೆವೂರು, ಮಣಿಪುರ, ಶಾಂತಿನಗರ, ಪ್ರಗತಿನಗರ, ಮಟ್ಟು ಸೇರಿದಂತೆ ವಿವಿಧೆಡೆಯ ಗಣೇಶೋತ್ಸವ ಸಮಿತಿಗಳು ಪ್ರತಿವರ್ಷ ಶೇಖರ ಕಲ್ಮಾಡಿ ಅವರು ನಿರ್ಮಿಸುವ ಮೂರ್ತಿಗಳನ್ನೇ ಕೊಂಡೊಯ್ಯುತ್ತವೆ.
ಅಲೆವೂರಿನ ನೆಹರೂ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕರಾಗಿ, ಬಳಿಕ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶೇಖರ ಕಲ್ಮಾಡಿ ಅವರು, ನಿವೃತ್ತಿಯ ಬಳಿಕವೂ ತಮ್ಮ ಕಲಾ ಸೇವೆಯನ್ನು ಮುಂದುವರಿಸಿದ್ದಾರೆ. ಒಂದೂವರೆ ಅಡಿ ಎತ್ತರದ ಮೂರ್ತಿಯಿಂದ ಐದು ಅಡಿ ಎತ್ತರದವರೆಗಿನ ವಿವಿಧ ಗಾತ್ರದ ಗಣಪತಿ ಮೂರ್ತಿಗಳು ಅವರ ಕೈಯಲ್ಲಿ ರೂಪುಗೊಳ್ಳುತ್ತಿವೆ.
ಈ ಬಾರಿ ಅಲೆವೂರಿನ ಗಣೇಶೋತ್ಸವ ಸಮಿತಿಗಾಗಿ ಸಿಂಹವಾಹನದಲ್ಲಿ ಆರೂಢನಾಗಿರುವ ಗಣೇಶನ ಸುಂದರ ಮೂರ್ತಿಯನ್ನು ಅವರು ನಿರ್ಮಿಸಿದ್ದಾರೆ. ಮಣ್ಣನ್ನು ಹದಗೊಳಿಸಿ, ಸೂಕ್ಷ್ಮ ಕೆತ್ತನೆಯ ಮೂಲಕ ಗಣಪನಿಗೆ ರೂಪ ನೀಡುವ ಕೆಲಸ ಪೂರ್ಣಗೊಂಡಿದೆ.
'ಪರಿಸರಕ್ಕೆ ಹಾನಿಯಾಗದಂತೆ ಮಣ್ಣಿನ ಮೂರ್ತಿಗಳನ್ನು ನಿರ್ಮಿಸುವುದೇ ನಮ್ಮ ಉದ್ದೇಶ. ಬಣ್ಣ ಬಳಕೆಯಲ್ಲಿಯೂ ಪರಿಸರಕ್ಕೆ ಹಾನಿಕಾರಕವಲ್ಲದ ಬಣ್ಣಗಳನ್ನು ಮಿತವಾಗಿ ಬಳಸುತ್ತೇವೆ' ಎಂದು ಶೇಖರ ಕಲ್ಮಾಡಿ ತಿಳಿಸಿದ್ದಾರೆ.
ಗಣೇಶೋತ್ಸವದ ಸಂಭ್ರಮದ ನಡುವೆ ಜಲಮೂಲಗಳ ಸಂರಕ್ಷಣೆಯ ಕಾಳಜಿಯೊಂದಿಗೆ ಮಣ್ಣಿನ ಗಣಪನನ್ನು ರೂಪಿಸುತ್ತಿರುವ ನಿವೃತ್ತ ಶಿಕ್ಷಕರ ಕಲಾತಪಸ್ಸು ಪರಿಸರ ಸ್ನೇಹಿ ಆಚರಣೆಗೆ ಮಾದರಿಯಾಗಿದೆ.

