ಉಡುಪಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.), ಟೂರಿಸ್ಟ್ ಬಸ್ ಮತ್ತು ಸರ್ವಿಸ್ ಬಸ್ ಏಜೆಂಟರು, ಸರ್ವಿಸ್ ಬಸ್ ನಿಲ್ದಾಣ, ಉಡುಪಿ ವತಿಯಿಂದ ಸರ್ವಿಸ್ ಬಸ್ ನಿಲ್ದಾಣದಲ್ಲಿ 27ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ವಿಘ್ನವಿನಾಯಕನಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಗಣಪತಿ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಗಣೇಶೋತ್ಸವ ದ ಹಿನ್ನೆಲೆಯಲ್ಲಿ ಸರ್ವಿಸ್ ಬಸ್ ನಿಲ್ದಾಣದ ಸುತ್ತಮುತ್ತ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿತ್ತು. ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಉತ್ಸವದ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಭವ್ಯ ಮೆರವಣಿಗೆ:
ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ರಾತ್ರಿ ಬೋರ್ಡ್ ಹೈಸ್ಕೂಲ್ ಮುಂಭಾಗದಿಂದ ಆರಂಭಗೊಂಡಿತು. ತ್ರಿವೇಣಿ ಸರ್ಕಲ್, ಹಳೆ ಡಯಾನ ಸರ್ಕಲ್ ಮಾರ್ಗವಾಗಿ ಸಾಗಿ, ನೈವೇದ್ಯ ಹೋಟೆಲ್ ಮುಂಭಾಗದ ಲಯನ್ಸ್ ಸರ್ಕಲ್ನಲ್ಲಿ ಯೂಟರ್ನ್ ಪಡೆದು ಕೋರ್ಟ್ ರಸ್ತೆ, ಅಲಂಕಾರ್, ಕಿದಿಯೂರು ಮಾರ್ಗವಾಗಿ ಬನ್ನಂಜೆ ಕಡೆಗೆ ಸಾಗಿತು. ಬಳಿಕ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯಲ್ಲಿ ಗಣಪತಿ ಮೂರ್ತಿಯನ್ನು ಜಲಸ್ತಂಭನ ಮಾಡಲಾಯಿತು.
ಮೆರವಣಿಗೆಯಲ್ಲಿ ವಾದ್ಯಮೇಳ, ನಾಸಿಕ್ ಬ್ಯಾಂಡ್, ವಿವಿಧ ಸಾಂಸ್ಕೃತಿಕ ಕಲಾತಂಡಗಳು ಹಾಗೂ ಕುಣಿತ ಭಜನಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು. ಮಾರ್ಗದುದ್ದಕ್ಕೂ ಭಕ್ತರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಸುಡುಮದ್ದು ಪ್ರದರ್ಶನವೂ ಮೆರವಣಿಗೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

