( ನ್ಯೂಸ್ ಕಡಬ) newskadaba.com ತ್ರಿಪುರಾ ಅ. 29: ತನ್ನನ್ನು ಮದುವೆಯಾಗಲು ನಿರಾಕರಿಸಿದ ಯುವಕನ ಮೇಲೆ ಯುವತಿಯೊಬ್ಬಳು ಆಯಸಿಡ್ ಎರಚಿದ ಘಟನೆ ತ್ರಿಪುರಾದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 27 ವರ್ಷದ ಯುವತಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನ್ನ ಬಾಯ್ಫ್ರೆಂಡ್ ಬೇರೊಬ್ಬಳ ಜೊತೆ ಸಂಬಂಧ ಹೊಂದಿದ್ದ ಸಿಟ್ಟಿನಿಂದ ಆಕೆ ಈ ಕೃತ್ಯ ಎಸಗಿದ್ದಾಳೆ.
ಆಯಸಿಡ್ ದಾಳಿಗೊಳಗಾದ ಯುವಕನನ್ನು ಅಗರ್ತಲಾ ಸರ್ಕಾರಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯುವಕನ ಮೂಗು ಹಾಗೂ ಕಣ್ಣುಗಳಿಗೆ ಗಂಭೀರ ಗಾಯಗಳಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂಬುದಾಗಿ ವರದಿಯಾಗಿದೆ.
ಆರೋಪಿ ಯುವತಿಯನ್ನು ಬಿನತಾ ಸಂತಾಲ್ ಎಂದು ಗುರುತಿಸಲಾಗಿದ್ದು, ಕಳೆದ 8 ವರ್ಷಗಳಿಂದ ಯುವಕನನ್ನು ತಾನು ಪ್ರೀತಿಸುತ್ತಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಅಲ್ಲದೆ ಕಳೆದ ಕೆಲ ದಿನಗಳಿಂದ ಆತ ಬೇರೊಬ್ಬ ಯುವತಿಯನ್ನು ಪ್ರೀತಿಸುತ್ತಿರುವ ವಿಚಾರ ತನ್ನ ಗಮನಕ್ಕೆ ಬಂದಿದೆ. ಇದರಿಂದ ತಾನು ಬೇಸರಗೊಂಡಿದ್ದೆ ಎಂದು ಹೇಳಿದ್ದಾಳೆ.

