ರಾಷ್ಟ್ರೀಯ
ಮೈಸೂರು ದಸರಾಗೆ ಆಯ್ಕೆಯಾದ ಆನೆಗಳ ಪಟ್ಟಿ ಬಿಡುಗಡೆ
ಮೈಸೂರು, ಸೆಪ್ಟೆಂಬರ್ 8: ಕೊರೊನಾ ಆತಂಕದ ನಡುವೆಯೇ ಕಳೆದ ಬಾರಿಯಂತೆ ಈ ಬಾರಿಯೂ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಜರುಗಲಿದೆ. ಮೈಸೂರು ದಸರಾವನ್ನು ಎಷ್ಟೇ ಸರಳವಾಗಿ ಆಚರಿಸಿದರೂ ಅದರ ಮುಖ್ಯ ಆಕರ್ಷಣೆ ಜಂಬೂ ಸವಾರಿ. ಹೀಗಾಗಿ ಈ ಬಾರಿಯ ದಸರಾ ಸಂಬಂಧಿತ ಸಭೆಯಲ್ಲಿ ಜಂಬೂ ಸವಾರಿ ಸೇರಿದಂತೆ ಕೆಲ ವಿಚಾರಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದ್ದು, ದಸರಾ ಆನೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಕೊರೊನಾ ಸೋಂಕಿನ ನಡುವೆ ಮೈಸೂರು ದಸರಾ 2021ನ್ನು ಆಚರಿಸುವ ಕುರಿತು ಹೈಪವರ್ ಕಮಿಟಿಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ.
ದಸರಾ ದೀಪಾಂಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಸಾಂಪ್ರದಾಯಿಕ ಆಚರಣೆ ಕುರಿತು ಚರ್ಚೆ ನಡೆದಿದ್ದು, ಸರಳ ದಸರಾ ಆಚರಣೆ ಸಂಬಂಧ ರೂಪುರೇಷೆ ತಯಾರಿ ಆಗಿದೆ. ಇತ್ತ ಈ ಬಾರಿಯೂ ಅಂಬಾರಿಯ ಹೊಣೆಯನ್ನು ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಹೆಗಲಿಗೆ ಹೊರಿಸಲಾಗಿದೆ. ಈ ಬಾರಿಯ ದಸರಾದಲ್ಲಿ ಎಂಟು ಆನೆಗಳು ಭಾಗಿಯಾಗಲಿದ್ದು, 16 ಆನೆಗಳ ಪಟ್ಟಿಯಲ್ಲಿ 8 ಆನೆಗಳ ಆಯ್ಕೆ ಬಹುತೇಕ ಖಚಿತವಾಗಿದೆ.
ಅಂತಿಮವಾಗಿ ದಸರಾ ಜಂಬೂಸವಾರಿಗೆ ಆಯ್ಕೆಯಾದ ಆನೆಗಳು ಸೆ.13ರಂದೇ ಹುಣಸೂರಿನ ವೀರನಹೊಸಹಳ್ಳಿಯಿಂದ ಗಜಪಡೆ ಪಯಣ ಆರಂಭಿಸಲಿವೆ. ಸೆ.16ರಂದು ಅಂಬಾವಿಲಾಸ ಅರಮನೆಗೆ ಆನೆಗಳು ಆಗಮಿಸಲಿದ್ದು, ತನ್ನ ತಂಡದೊಂದಿಗೆ ನಾಯಕ ಅಭಿಮನ್ಯು ಆಗಮಿಸಲಿದ್ದಾನೆ. ಒಟ್ಟು 8 ಆನೆಗಳನ್ನು ಮೈಸೂರಿಗೆ ಕರೆತರಲು ಅರಣ್ಯ ಇಲಾಖೆ ನಿರ್ಧಾರ ಮಾಡಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಅರಮನೆ ಆವರಣಕ್ಕಷ್ಟೇ ಜಂಬೂಸವಾರಿ ಸೀಮಿತವಾಗಲಿದೆ.
ಸೆ.10ರ ನಂತರ ಮೈಸೂರಿಗೆ ಗಜಪಯಣದ ಮೂಲಕ ಆನೆಗಳನ್ನು ಕರೆತರಲು ಸಿದ್ಧತೆ ನಡೆದಿದೆ. ಆನೆ ಶಿಬಿರಕ್ಕೆ ಭೇಟಿ ಕೊಟ್ಟು 16 ಆನೆಗಳ ಆರೋಗ್ಯ ಸ್ಥಿತಿ ಪರಿಶೀಲಿಸಿ, ತಾತ್ಕಾಲಿಕ ಪಟ್ಟಿ ತಯಾರಿಸಿದ್ದ ಅಧಿಕಾರಿಗಳು, ಡಿಸಿಎಫ್ ಕರಿಕಾಳನ್ ಮೂಲಕ ಅದನ್ನು ಬೆಂಗಳೂರಿನ ಪಿಸಿಸಿಎಫ್ ಕಚೇರಿಗೆ ರವಾನಿಸಿದ್ದರು.
ಅಭಿಮನ್ಯು ನೇತೃತ್ವದಲ್ಲಿ 8 ಆನೆಗಳನ್ನು ಬಳಸಿಕೊಳ್ಳಲು ಪಿಸಿಸಿಎಫ್ ಅನುಮತಿ ನೀಡಿದೆ. ಕಳೆದ ವರ್ಷದ ದಸರಾಗೆ ಮೂರು ಗಂಡಾನೆ, ಎರಡು ಹೆಣ್ಣಾನೆಯನ್ನಷ್ಟೇ ಕರೆತರಲಾಗಿತ್ತು. ಆದರೆ, ಈ ಬಾರಿ ಎರಡು ಗಂಡಾನೆ ಹಾಗೂ ಒಂದು ಹೆಣ್ಣಾನೆಯನ್ನು ಹೆಚ್ಚುವರಿಯಾಗಿ ಕರೆ ತರಲು ನಿರ್ಧಾರ ಮಾಡಲಾಗಿದೆ. ಗಜಪಡೆಯಲ್ಲಿ 5 ಗಂಡಾನೆ, 3 ಹೆಣ್ಣಾನೆ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.

ಈ ಸಾಲಿನ ದಸರಾದಲ್ಲಿ ಮತ್ತಿಗೋಡು ಶಿಬಿರದಿಂದ ಚಿನ್ನದ ಅಂಬಾರಿ ಹೊರುವ ಆನೆ ಅಭಿಮನ್ಯು ಹಾಗೂ ಗೋಪಾಲಸ್ವಾಮಿ ಬರಲಿವೆ. ಆನೆಕಾಡು ಶಿಬಿರದ ವಿಕ್ರಮ, ದುಬಾರೆ ಶಿಬಿರದ ಕಾವೇರಿ, ಧನಂಜಯ, ನಾಗರಹೊಳೆಯ ದೊಡ್ಡ ಹರವೆ ಶಿಬಿರದ ಅಶ್ವತ್ಥಾಮ, ಬಂಡೀಪುರ ರಾಂಪುರ ಶಿಬಿರದ ಚೈತ್ರಾ ಹಾಗೂ ಲಕ್ಷ್ಮಿ ಜತೆಯಾಗಿ ಸಾಥ್ ನೀಡಲಿವೆ. ಇದೇ ಪ್ರಥಮವಾಗಿ 34 ವರ್ಷದ ಅಶ್ವತ್ಥಾಮ ದಸರಾಗೆ ಪ್ರವೇಶ ಪಡೆದಿದ್ದಾನೆ. ಕಿರಿಯ ಆನೆಯಾಗಿ ಲಕ್ಷ್ಮೀ ಎರಡನೇ ಬಾರಿಗೆ ದಸರಾದಲ್ಲಿ ಭಾಗಿಯಾಗಲಿದ್ದಾಳೆ.
ಸೆ.8ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಸರಾ ಆನೆಗಳ ಪಟ್ಟಿ ಬಿಡುಗಡೆಯಾಗಿದ್ದು, ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಕುರಿತಾದ ಬಣ್ಣದ ಚಿತ್ರವುಳ್ಳ ಕೈಪಿಡಿ ತಯಾರಿಸಲಾಗಿದೆ.
ಗಜಪಯಣಕ್ಕೆ ಸೆ.13, 15 ಹಾಗೂ 16 ಒಳ್ಳೆ ದಿನವಾಗಿದೆ. ಅದರಲ್ಲೂ ಸೆ.13 ಭಾದ್ರಪದ ಸಪ್ತಮಿ ದಿನ ಆಗಿರುವುದರಿಂದ ಗಜಪಯಣಕ್ಕೆ ಒಳ್ಳೆಯ ದಿನ. ಅಂದು ಆನೆಗಳು ಅರಮನೆ ಪ್ರವೇಶಿಸುವುದು ಸೂಕ್ತ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸೆ.13 ರಂದು ಬೆಳಿಗ್ಗೆ 11 ಗಂಟೆ ನಂತರ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗೇಟ್ ಬಳಿ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೈಸೂರಿನ ಅರಣ್ಯ ಭವನಕ್ಕೆ ಕರೆತರಲಾಗುತ್ತದೆ. ಸೆ.16 ರಂದು ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ನಂತರ ಮೈಸೂರು ಅರಮನೆಗೆ ಕರೆದುಕೊಂಡು ಬರಲು ನಿರ್ಧಾರ ಮಾಡಲಾಗಿದೆ.
source: oneindia.com
related stories
-
Breaking Karnataka ಬೆಳ್ಳಕ್ಕಿ ಮರಿಗಳ ಸಾವು
-
ರಾಜ್ಯ ಬಂಡಿಪುರ ಅರಣ್ಯದಲ್ಲಿ ಹುಲಿ ಕಳೆಬರ ಪತ್ತೆ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
-
ಟಾಪ್ 10 ಸುದ್ದಿ ಕಲಕೇರಿ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವ