ಚೆನ್ನೈ: ವಿಸಿಕೆ ಮತ್ತು ಮುಸ್ಲಿಂ ಲೀಗ್ ಪಕ್ಷಗಳು ಬೆಂಬಲ ಸೂಚಿಸಿದ ಬೆನ್ನಲ್ಲೇ ಟಿವಿಕೆ ಪಕ್ಷದ ಮುಖ್ಯಸ್ಥ ಜೋಸೆಫ್ ವಿಜಯ್ ಅವರು, ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ 234 ಕ್ಷೇತ್ರಗಳಲ್ಲಿ ಟಿವಿಕೆ ಬರೋಬ್ಬರಿ 108 ಕ್ಷೇತ್ರಗಳನ್ನು ಗೆದ್ದಿದೆ.
ಆದರೆ ವಿಜಯ್ ಗೆದ್ದ ಎರಡು ಕ್ಷೇತ್ರಗಳಲ್ಲಿ ಒಂದನ್ನು ತೆರವುಗೊಳಿಸಬೇಕಾದ ಕಾರಣ ಟಿವಿಕೆ ಬಲ 107ಕ್ಕೆ ಕುಸಿದಿತ್ತು. ಬಹುಮತಕ್ಕೆ 11 ಕ್ಷೇತ್ರಗಳ ಅಗತ್ಯವಿತ್ತು.
5 ಕ್ಷೇತ್ರಗಳನ್ನು ಗೆದ್ದ ಕಾಂಗ್ರೆಸ್ ಬೆಂಬಲ ಕೊಡುವುದಾಗಿ ಪ್ರಾರಂಭದಲ್ಲಿಯೇ ಘೋಷಿಸಿತ್ತು. ತಲಾ ಎರಡು ಕ್ಷೇತ್ರಗಳನ್ನು ಗೆದ್ದಿದ್ದ ಸಿಪಿಐ ಮತ್ತು ಸಿಪಿಐ(ಎಂ) ಕೂಡ ಶುಕ್ರವಾರ ಬೆಂಬಲ ಸೂಚಿಸಿದ್ದವು. ಇಂದು(ಶನಿವಾರ) ವಿಸಿಕೆ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಧಿಕೃತವಾಗಿ ಬೆಂಬಲ ಸೂಚಿಸಿವೆ. ಆ ಮೂಲಕ ಟಿವಿಕೆ ಬಲ 120ಕ್ಕೆ ಏರಿಕೆಯಾಗಿದೆ.
ಸರ್ಕಾರ ರಚನೆಗೆ ಈಗಾಗಲೇ ಮೂರು ಬಾರಿ ಹಕ್ಕು ಮಂಡಿಸಿ ತಿರಸ್ಕೃತಗೊಂಡಿರುವ ವಿಜಯ್ ಅವರು, ನಾಲ್ಕನೇ ಬಾರಿ ಪೂರ್ಣ ಬಹುಮತದೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ.

