ನವದೆಹಲಿ: 'ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಹೆಸರಿನಲ್ಲಿ ನಡೆಸುತ್ತಿರುವ ಚಳವಳಿ ಎಂಬುದು ವ್ಯವಹಾರವಾಗಿದೆ' ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ರಸ್ತೆ ನಿರ್ಮಾಣದ ಮೇಲುಸ್ತುವಾರಿ ವಹಿಸಿದ್ದ ಸರ್ಕಾರಿ ನೌಕರರೊಬ್ಬರಿಗೆ ಅಡ್ಡಿಪಡಿಸಿದ ಆರ್ಟಿಐ ಹೋರಾಟಗಾರ ಹಾಗೂ ಇತರರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ.
ಆರ್ಟಿಐ ಕಾರ್ಯಕರ್ತ ರಾಕೇಶ್ ಕುಮಾರ್ ಬೆಹ್ಲ್ ಹಾಗೂ ಅವರ ಆಪ್ತನಿಗೆ ಜಾಮೀನು ನೀಡಲು ನಿರಾಕರಿಸಿದ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಹಾಗೂ ವಿಜಯ್ ಬಿಷ್ಣೋಯಿ ಅವರಿದ್ದ ನ್ಯಾಯಪೀಠವು, ರಸ್ತೆ ನಿರ್ಮಾಣದ ಮೇಲ್ವಿಚಾರಣೆಯ ಆರ್ಟಿಐ ಕಾರ್ಯಕರ್ತರ ಅಧಿಕಾರವನ್ನು ಪ್ರಶ್ನಿಸಿತು.
'ಆರ್ಟಿಐ ಚಳವಳಿ ಎಂಬುದು ಹೊಸ ಮಾದರಿಯ ವ್ಯವಹಾರವಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ಅನುದಾನ ನೀಡುತ್ತದೆ. ನೀವೂ ಏನೂ ಅಲ್ಲ.. ಹಳದಿ ಪತ್ರಿಕೋದ್ಯಮ...ವಜಾಗೊಳಿಸಲಾಗಿದೆ' ಎಂದು ನ್ಯಾಯಮೂರ್ತಿ ಮೆಹ್ತಾ ತಿಳಿಸಿದರು.
ಇದೇ ಧಾಟಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಬಿಷ್ಣೋಯಿ, 'ರಸ್ತೆ ನಿರ್ಮಾಣ ಕಾರ್ಯವನ್ನು ಮೇಲುಸ್ತುವಾರಿ ವಹಿಸಲು ನೀವು ಯಾರು..? ನೀವೇನೂ ಮೇಲಾಧಿಕಾರಿಗಳೋ' ಎಂದು ಪ್ರಶ್ನಿಸಿದ್ದಾರೆ.
ರಸ್ತೆ ನಿರ್ಮಾಣ ಕಾರ್ಯದಲ್ಲಿ ವ್ಯಾಪಕ ಭ್ರಷ್ಟಾಚಾರವೆಸಗಲಾಗಿದೆ. ಇಬ್ಬರನ್ನೂ ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಅವರ ಪರ ವಕೀಲರು ವಾದ ಮಂಡಿಸಿದರು.
ಈ ಪ್ರಕರಣದಲ್ಲಿ ತಮ್ಮ ಕಕ್ಷಿದಾರರಿಗೆ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಪ್ರಕರಣವೇನು..?
ಆರ್ಟಿಐ ಕಾರ್ಯಕರ್ತ ರಾಕೇಶ್ ಕುಮಾರ್ ಬೆಹ್ಲ್ ಹಾಗೂ ಅವರ ಸಹವರ್ತಿ ಮಿಂಟೂ ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಬಟಾಲಾದಲ್ಲಿ ನಡೆಯುತ್ತಿದ್ದ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದರು ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.

