ಚೆನ್ನೈ: ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರವು ಶುಕ್ರವಾರ ಪಿ. ಕೆ. ಸೆಂಥಿಲ್ ಕುಮಾರಿ ಸೇರಿ ಆರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಕಡ್ಡಾಯ ಕಾಯುವಿಕೆಯಲ್ಲಿದ್ದ ಸೆಂಥಿಲ್ ಕುಮಾರಿ ಅವರನ್ನು ಚೆನ್ನೈನ ಸಂಚಾರ ಮತ್ತು ರಸ್ತೆ ಸುರಕ್ಷತೆ ಪೊಲೀಸ್ ಮಹಾನಿರೀಕ್ಷಕರಾಗಿ (ಐಜಿಪಿ) ನೇಮಿಸಿದೆ.
ಉಳಿದಂತೆ ದೊಂಗರೆ ಪ್ರವೀಣ್ ಉಮೇಶ್ ಅವರನ್ನು ತಿರುಚಿರಾಪಳ್ಳಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್ಪಿ) ನಿಯೋಜಿಸಲಾಗಿದೆ. ಪ್ರಸ್ತುತ ಚೆನ್ನೈನ ಪಶ್ಚಿಮ ವಲಯದ ಜಾಗೃತ ಮತ್ತು ಭ್ರಷ್ಟಾಚಾರ ನಿರೋಧಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಉಮೇಶ್ ಅವರು ಎಸ್. ಸೆಲ್ವನಗರಥಿನಂ ಅವರ ಸ್ಥಾನವನ್ನು ತುಂಬಲಿದ್ದಾರೆ.
ತಿರುಪತ್ತೂರು ಜಿಲ್ಲೆಯ ಎಸ್ಪಿ ಆಗಿದ್ದ ವಿ. ಶ್ಯಾಮಲಾ ದೇವಿ ಅವರನ್ನು ಚೆನ್ನೈನ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಪ್ರಸ್ತುತ ಕೊಯಮತ್ತೂರು ನಗರದ ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತರಾಗಿರುವ ಎಸ್. ಅಶೋಕ್ ಕುಮಾರ್ ಅವರು ತೆಂಕಾಸಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕೃಷ್ಣಗಿರಿ ಜಿಲ್ಲೆಯ ಹೊಸೂರು ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ (ಎಎಸ್ಪಿ) ಅಕ್ಷಯ್ ಅನಿಲ್ ವಾಖರೆ ಅವರಿಗೆ ಬಡ್ತಿ ನೀಡಲಾಗಿದ್ದು, ವಿ. ಶ್ಯಾಮಲಾ ದೇವಿ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಕನ್ನಿಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಉಪವಿಭಾಗದ ಎಎಸ್ಪಿ ಆಗಿದ್ದ ವಿ. ಲಲಿತ್ ಕುಮಾರ್ ಅವರಿಗೂ ಬಡ್ತಿ ನೀಡಿ, ಪೆರಂಬಲೂರು ಜಿಲ್ಲೆಯ ಎಸ್ಪಿ ಆಗಿ ನಿಯೋಜಿಸಲಾಗಿದೆ.
ಈ ವರ್ಗಾವಣೆಯು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಮಣಿವಾಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

