Dailyhunt Logo
  • Light mode
    Follow system
    Dark mode
    • Play Story
    • App Story
ಅಕಾಲಿಕ ಮಳೆಯಾರ್ಭಟಕ್ಕೆ ಬೆಳೆ, ಮನೆಗಳಿಗೆ ಹಾನಿ: ತ್ವರಿತ ಪರಿಹಾರಕ್ಕೆ ಅಶೋಕ ಆಗ್ರಹ

ಅಕಾಲಿಕ ಮಳೆಯಾರ್ಭಟಕ್ಕೆ ಬೆಳೆ, ಮನೆಗಳಿಗೆ ಹಾನಿ: ತ್ವರಿತ ಪರಿಹಾರಕ್ಕೆ ಅಶೋಕ ಆಗ್ರಹ

ಬೆಂಗಳೂರು: ರಾಜ್ಯದ ವಿವಿಧೆಡೆ ಸಂಭವಿಸಿದ ಅಕಾಲಿಕ ಮಳೆಯ ಆರ್ಭಟಕ್ಕೆ ಅಡಿಕೆ, ರಬ್ಬರ್ ಹಾಗೂ ತೆಂಗಿನ ಮರಗಳು ಧರಾಶಾಹಿಯಾಗಿವೆ, ಮನೆಗಳು ಹಾನಿಗೊಳಗಾಗಿವೆ. ರಾಜ್ಯ ಸರ್ಕಾರ ಈ ಕೊಡಲೇ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆಗ್ರಹಿಸಿದ್ದಾರೆ

ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿರುವ ಅವರು, ರಾಜ್ಯದ ಏಳು ಜಿಲ್ಲೆಗಳಲ್ಲಿ (ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ಹಾಸನ) ಸಂಭವಿಸಿದ ಅಕಾಲಿಕ ಮಳೆಯ ಆರ್ಭಟಕ್ಕೆ ರೈತರು ಮತ್ತು ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಅಡಿಕೆ, ರಬ್ಬರ್ ಹಾಗೂ ತೆಂಗಿನ ಮರಗಳು ಧರಾಶಾಹಿಯಾಗಿವೆ, ಮನೆಗಳು ಹಾನಿಗೊಳಗಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕೊಡಲೇ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

  • ತ್ವರಿತ ಸಮೀಕ್ಷೆ: ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣವೇ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಮತ್ತು ಆಸ್ತಿ ಪಾಸ್ತಿ ನಷ್ಟದ ಬಗ್ಗೆ ನಿಖರ ಸಮೀಕ್ಷೆ ನಡೆಸಬೇಕು.

  • ಪರಿಹಾರ ಘೋಷಣೆ: ಅಡಿಕೆ, ರಬ್ಬರ್ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಕಳೆದುಕೊಂಡ ರೈತರಿಗೆ ವೈಜ್ಞಾನಿಕವಾಗಿ ಹೆಚ್ಚಿನ ಪರಿಹಾರವನ್ನು ಸರ್ಕಾರ ಕೂಡಲೇ ಘೋಷಿಸಬೇಕು.

  • ಮನೆ ಹಾನಿಗೆ ಸಹಾಯ: ಮಳೆಯಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ತಕ್ಷಣದ ತಾತ್ಕಾಲಿಕ ನೆರವು ಹಾಗೂ ಪುನರ್ನಿರ್ಮಾಣಕ್ಕೆ ಧನಸಹಾಯ ನೀಡಬೇಕು.

  • ವಿದ್ಯುತ್ ಸಂಪರ್ಕ ಸರಿಪಡಿಸಿ: ಮರಗಳು ಬಿದ್ದು ವಿದ್ಯುತ್ ಕಂಬಗಳು ಮುರಿದಿರುವ ಕಡೆಗಳಲ್ಲಿ ತುರ್ತಾಗಿ ದುರಸ್ತಿ ಕಾರ್ಯ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

ರೈತರು ಸಂಕಷ್ಟದಲ್ಲಿರುವಾಗ ಕಾಲಹರಣ ಮಾಡದೆ, ವಿಳಂಬ ಧೋರಣೆ ಅನುಸರಿಸದೆ ಸರ್ಕಾರ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಸಂತ್ರಸ್ತರ ಬೆನ್ನಿಗೆ ನಿಲ್ಲಬೇಕು ಎಂದೂ ಅವರು ಹೇಳಿದ್ದಾರೆ.

ಶಿವಮೊಗ್ಗ: ಮಾರ್ಚ್‌ನಲ್ಲೇ ಮಳೆ ಅಬ್ಬರ; ತೋಟಗಾರಿಕೆ ಬೆಳೆ ತತ್ತರ
Dailyhunt
Disclaimer: This content has not been generated, created or edited by Dailyhunt. Publisher: Prajavani