ನವದೆಹಲಿ: ಅಖಾಡ ಪರಿಷತ್ನ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ಸಾವಿನ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. ಈ ಪ್ರಕರಣವನ್ನು ಭೇದಿಸುವುದಕ್ಕಾಗಿ ಸಿಬಿಐ ವಿಶೇಷ ತನಿಖಾ ತಂಡವೊಂದನ್ನು ರಚಿಸಿದೆ ಎಂದು ಸುದ್ದಿಸಂಸ್ಥೆ ಎಎನ್ಐ ಟ್ವೀಟ್ ಮಾಡಿದೆ.
ಮಹಾಂತ ನರೇಂದ್ರ ಗಿರಿ ಅವರು ಸೋಮವಾರ ಸಂಜೆ ಪ್ರಯಾಗರಾಜ್ನ ದರ್ಗಾಂಜ್ ಪ್ರದೇಶದ ಬಘಂಬರಿ ಮಠದ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಮೇಲ್ನೋಟಕ್ಕೆ ನರೇಂದ್ರ ಗಿರಿ ಅವರ ಸಾವು ಆತ್ಮಹತ್ಯೆಯಂತೆ ಕಂಡುಬಂದರೂ, ಅವರನ್ನು ಕೊಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಗಿರಿ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ಉತ್ತರ ಪ್ರದೇಶದ ಹಲವು ರಾಜಕೀಯ ಮುಖಂಡರು ಒತ್ತಾಯಿಸಿದ್ದರು.
ನರೇಂದ್ರ ಗಿರಿ ಅಸಹಜ ಸಾವಿನಲ್ಲಿ ಅವರ ಶಿಷ್ಯ ಮಹಾಂತ ಜ್ಞಾನ ದಾಸ್ ಕೈವಾಡವಿದೆ ಎಂಬ ಮಾತುಗಳು ಮುನ್ನೆಲೆಗೆ ಬಂದಿವೆ. ದಾಸ್ ಅವರು ಕ್ರಿಮಿನಲ್ ಚಟುವಟಿಕೆಗಳು ಮತ್ತು ಆಕ್ಷೇಪಾರ್ಹ ನಡವಳಿಕೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಉಜ್ಜಯಿನಿ, ಪ್ರಯಾಗರಾಜ್ ಮತ್ತು ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಕುಂಭಮೇಳಗಳನ್ನು ನರೇಂದ್ರ ಗಿರಿ ನೇತೃತ್ವದಲ್ಲಿ ನಡೆಸಲಾಗಿತ್ತು. ಅಯೋಧ್ಯೆಯ ರಾಮ ಮಂದಿರ ಹೋರಾಟದಲ್ಲಿಯೂ ಗಿರಿ ಅವರ ಪಾತ್ರ ಮಹತ್ವದ್ದಾಗಿದೆ.

