ಅರಕಲಗೂಡು: ಗ್ರಾಮೀಣ ಭಾಗದ ಮುಗ್ಧ ಮಕ್ಕಳಿಗೆ ತಳಮಟ್ಟದಿಂದಲೇ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮತ್ತು ಭದ್ರ ಬುನಾದಿ ದೊರೆಯಬೇಕು ಎಂದು ಶಾಸಕ ಎ. ಮಂಜು ತಿಳಿಸಿದರು.
ಪಟ್ಟಣದ ಜೈಭೀಮ್ ನಗರದಲ್ಲಿ ₹20 ಲಕ್ಷ ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಸಂಸ್ಕಾರ ಸಿಕ್ಕರೆ ಮಾತ್ರ ಅವರು ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಯೋಜನೆಯಡಿ ಸುಸಜ್ಜಿತ ಹಾಗೂ ಮಾದರಿ ಅಂಗನವಾಡಿ ಕೇಂದ್ರದ ನಿರ್ಮಾಣ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ, ಬೇರೆ ತಾಲ್ಲೂಕಿಗೆ ಮಂಜೂರಾಗಿದ್ದ ಈ ವಿಶೇಷ ಯೋಜನೆಯನ್ನು ಹಿಂದಿನ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ವಿಶೇಷ ಆಸಕ್ತಿಯಿಂದಾಗಿ ಇಲ್ಲಿಗೆ ತರಲಾಗಿದೆ. ಇದು ಕೇವಲ ಒಂದು ಸಾಮಾನ್ಯ ಕಟ್ಟಡವಾಗಿ ಉಳಿಯದೆ, ಇಡೀ ಜಿಲ್ಲೆಗೇ ಅತ್ಯುತ್ತಮ ಮಾದರಿ ಅಂಗನವಾಡಿ ಕೇಂದ್ರವಾಗಿ ಹೊರಹೊಮ್ಮಲಿದೆ. ಕಟ್ಟಡ ನಿರ್ಮಾಣ ಕಾರ್ಯವು ಅತ್ಯಂತ ಗುಣಮಟ್ಟದಿಂದ ಕೂಡಿರುವಂತೆ ಸೂಚಿಸಿದರು.
ಸಿಡಿಪಿಒ ವೆಂಕಟೇಶ್, ಮುಖಂಡರಾದ ಕೃಷ್ಣಯ್ಯ, ರಾಮು, ಚಂದ್ರಣ್ಣ, ನರಸೇಗೌಡ, ವಿ.ಎ. ನಂಜುಂಡಸ್ವಾಮಿ, ವರದರಾಜ್, ಸಣ್ಣಯ್ಯ, ಕೀರ್ತಿರಾಜ್ ಉಪಸ್ಥಿತರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-36-1140952224

