ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಶುಕ್ರವಾರವೂ ಗಂಭೀರವಾಗಿದ್ದು, ಮತ್ತೊಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ 98ಕ್ಕೆ ಏರಿಕೆಯಾಗಿದೆ. ಪ್ರವಾಹದಿಂದಾಗಿ ರಾಜ್ಯದಲ್ಲಿನ 1.55 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಶಿವಸಾಗರ, ಲಖಿಂಪುರ, ಗೋಲಾಘಾಟ್ ಸೇರಿದಂತೆ 13 ಜಿಲ್ಲೆಗಳು ಪ್ರವಾಹದಿಂದ ಬಾಧಿತವಾಗಿದ್ದು, 464 ಗ್ರಾಮಗಳ ಮೇಲೆ ಪರಿಣಾಮ ಬೀರಿದೆ. ರಾಜ್ಯದಲ್ಲಿ ಒಟ್ಟು ಪ್ರವಾಹ ಪೀಡಿತರ ಸಂಖ್ಯೆ 1,55,849 ಕ್ಕೆ ತಲುಪಿದೆ ಎಂದು ಮಾಹಿತಿ ನೀಡಿದೆ.
ಪ್ರವಾಹಪೀಡಿತರಿಗಾಗಿ ರಾಜ್ಯ ಸರ್ಕಾರವು 55 ಪರಿಹಾರ ಶಿಬಿರಗಳನ್ನು ನಡೆಸುತ್ತಿದ್ದು, 10 ಸಾವಿರಕ್ಕೂ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಿದೆ. ಹೆಚ್ಚುವರಿಯಾಗಿ 18 ಪರಿಹಾರ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ.
ಗೋಲಾಘಾಟ್ ಜಿಲ್ಲೆಯಲ್ಲಿ ಧನಸಿರಿ ನದಿ ಹಾಗೂ ಶ್ರೀಭೂಮಿ ಜಿಲ್ಲೆಯಲ್ಲಿ ಕುಶಿಯಾರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ 10,748.64 ಹೆಕ್ಟೇರ್ ಬೆಳೆ ಪ್ರದೇಶ ಜಲಾವೃತಗೊಂಡಿದ್ದು, 47 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಬಾಧಿತವಾಗಿವೆ.
ಭಾರಿ ಪ್ರವಾಹದಿಂದಾಗಿ ಹಲವು ಕಡೆ ರಸ್ತೆಗಳು, ಸೇತುವೆಗಳು ಮತ್ತು ಮನೆಗಳು ಸೇರಿದಂತೆ ವಿವಿಧ ಮೂಲಸೌಕರ್ಯಗಳಿಗೆ ಹಾನಿಯಾಗಿದೆ.

