Dailyhunt
ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ದೇವರಲ್ಲಿ ಬೇಡಿಕೊಂಡಿದ್ದೆ: ಸಿಜೆಐ ಚಂದ್ರಚೂಡ್

ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ದೇವರಲ್ಲಿ ಬೇಡಿಕೊಂಡಿದ್ದೆ: ಸಿಜೆಐ ಚಂದ್ರಚೂಡ್

ಪುಣೆ: ರಾಮ ಜನ್ಮಭೂಮಿ - ಬಾಬರಿ ಮಸೀದಿ ವಿವಾದದ ಇತ್ಯರ್ಥಕ್ಕೆ ದಾರಿ ತೋರಿಸುವಂತೆ ದೇವರಲ್ಲಿ ಬೇಡಿಕೊಂಡಿದ್ದುದಾಗಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.

ನಂಬಿಕೆ ಇದ್ದವರ ಪಾಲಿಗೆ ದೇವರು ದಾರಿ ತೋರಿಸುತ್ತಾನೆ ಎಂದೂ ಚಂದ್ರಚೂಡ್ ಹೇಳಿದ್ದಾರೆ.

ಖೇಡ್‌ ತಾಲ್ಲೂಕಿನ ತಮ್ಮ ಊರಾಗಿರುವ ಕನ್ಹೇರಸರ್‌ದ ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು.

'ನಮ್ಮ ಮುಂದೆ ಪ್ರಕರಣಗಳು ಬರುವುದು, ನಮಗೆ ಪರಿಹಾರ ಕಂಡುಕೊಳ್ಳಲು ಆಗದೆ ಇರುವುದು ಬಹಳ ಸಾಮಾನ್ಯ. ನನ್ನ ಮುಂದೆ ಮೂರು ತಿಂಗಳು ಇದ್ದ ಅಯೋಧ್ಯೆ ಪ್ರಕರಣದ ಸಂದರ್ಭದಲ್ಲಿಯೂ ಇದೇ ರೀತಿ ಆಯಿತು. ದೇವರ ಮುಂದೆ ಕುಳಿತು ನಾನು, ಇದಕ್ಕೆ ನೀನೇ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದೆ' ಎಂದರು.

ತಾವು ಯಾವಾಗಲೂ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದ ಚಂದ್ರಚೂಡ್, 'ನಿಮಗೆ ನಂಬಿಕೆ ಇದ್ದರೆ ದೇವರು ಯಾವಾಗಲೂ ಒಂದು ದಾರಿ ತೋರಿಸುತ್ತಾನೆ' ಎಂದರು. ಅಯೋಧ್ಯೆ ಪ್ರಕರಣದ ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಚಂದ್ರಚೂಡ್ ಅವರೂ ಇದ್ದರು.

ಚಂದ್ರಚೂಡ್ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಈ ವರ್ಷದ ಜುಲೈನಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani